Vijayapura: ಜೈಲಿನಿಂದ ಪ್ರಧಾನಿ ಮೋದಿಗೆ ವಿಡಿಯೋ ಮಾಡಿ ರಕ್ಷಣೆ ಕೋರಿದ ಖೈದಿ.!
Team Udayavani, Jan 28, 2024, 6:29 PM IST
ವಿಜಯಪುರ : ಆಯೋಧ್ಯೆಯಲ್ಲಿ ಬಾಲರಾಮ ಮೂರ್ತಿ ಪ್ರತಿಷ್ಠಾಪನೆ ದಿನ ವಿಜಯಪುರ ಕೇಂದ್ರ ಕಾರಾಗೃಹದಲ್ಲಿರುವ ರಾಮನ ಪೂಜೆಮಾಡಿ ಪ್ರಸಾದ ವಿತರಿಸಿದ ಖೈದಿಗಳ ಮೇಲೆ ಹಲ್ಲೆ ನಡೆದಿದ್ದಾಗಿ ವರದಿಯಾಗಿದೆ. ಸದರಿ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಅನ್ಯ ಧರ್ಮೀಯ ಖೈದಿಗಳು ಹಲ್ಲೆ ನಡೆಸಿದ್ದಾಗಿ ಖೈದಿಯೊಬ್ಬ ಜೈಲಿನಿಂದಲೇ ವಿಡಿಯೋ ಮಾಡಿ ಪ್ರಧಾನಿ ಮೋದಿ ಅವರಿಗೆ ರಕಣೆಗೆ ವಿಜಯಪುರ ಕೇಂದ್ರ ಕಾರಾಗೃಹದಲ್ಲಿರುವ ಮಹಾರಾಷ್ಟ್ರ ಮೂಲದ ಪರಮೇಶ್ವರ 3 ನಿಮಿಷ 5 ಸೆಕೆಂಡ್ಗಳ ವಿಡಿಯೋ ಮಾಡಿ ರಕ್ಷಣೆಗೆ ಮೊರೆ ಇಟ್ಟಿದ್ದಾನೆ.
ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆ ಹಾಗೂ ಬಾಲರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ದಿನ ವಿಜಯಪುರ ಜೈಲಿನಲ್ಲಿ ರಾಮನ ಪೂಜೆ ಮಾಡಿ, ಪ್ರಸಾದ ಹಂಚಿದ್ದೆವು. ಆದರೆ ಅನ್ಯ ಕೋವಿಮ ಖೈದಿಗಳು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ನಮ್ಮ ಮೇಲೆ ಹಲ್ಲೆ ನಡೆಸಿದ ಸಹಖೈದಿಗಳ ವಿರುದ್ಧ ಕ್ರಮ ಕೈಗೊಳ್ಳದೇ ಅನ್ಯಾಯ ಮಾಡಿದ್ದಾರೆ. ಕೂಡಲೇ ನಮಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನ್ಯಾಯ ಕಲ್ಪಿಸಬೇಕು ಎಂದು ಹೇಳಿದ್ದಾರೆ.
ಸದ್ಯ ವಿಡಿಯೋ ವೈರಲ್ ಆಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಅಯೋಧ್ಯೆಯ ರಾಮ ಮಂದಿರ ಲೋಕಾರ್ಪಣೆ ದಿನವಾದ ಜ.22 ರಂದು ರಾಮನ ಪೂಜೆಗೆ ಅವಕಾಶ ನೀಡುವಂತೆ ಜೈಲು ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಸ್ಪಂದಿಸಲಿಲ್ಲ.
ಆದರೂ ಆ ದಿನ ವಿಜಯಪುರ ಕೇಂದ್ರ ಕಾರಾಗೃಹದಲ್ಲಿ ರಾಮನಿಗೆ ಪೂಜೆ ಸಲ್ಲಿಸಿ, ಪ್ರಸಾದ ಹಂಚಿದ್ದೆವು. ಆದರೆ ರಂದು ಸಹಾಯಕ ಜೈಲು ಅಧೀಕ್ಷಕ ಅಧಿಕಾರಿ ಕೆ.ಎಂ.ಚೌಧರಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದು, ಚೌಧರಿ ಅವರು ಜ.23 ರಂದು ನಾನು ಸೇರಿದಂತೆ ನನ್ನೊಂದಿಗೆ ಪೂಜೆ ಸಲ್ಲಿಸಿದ ಇತರೆ ಇಬ್ಬರು ಖೈದಿಗಳನ್ನು ಕರೆಸಿ ವಿಚಾರಣೆ ನಡೆಸಿದರು. ಆಗ ಅನ್ಯ ಕೋಮಿಗೆ ಸೇರಿದ ಶೇಖ್ ಮೋದಿ ಹಾಗೂ ಇತರರು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವಿಡಿಯೋದಲ್ಲಿ ದೂರಿದ್ದಾನೆ.
ನಮ್ಮ ಮೇಲೆ ಹಲ್ಲೆ ನಡೆಯುತ್ತಿದ್ದರೂ ಜೈಲು ಅಧಿಕಾರಿಗಳು, ಸಿಬ್ಬಂದಿ ನಮ್ಮ ರಕ್ಷಣೆಗೆ ಧಾವಿಸಲಿಲ್ಲ. ಬದಲಾಗಿ ನಮ್ಮನ್ನೇ ಜೈಲು ಆವರಣಕ್ಕೂ ಬಿಡದೇ ಸೆಲ್ ನಲ್ಲಿ ಕೂಡಿಹಾಕಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ, ಯೋಗಿ ತಮ್ಮ ನೆರವಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ.
ಸದರಿ ಬೆಳವಣಿಗೆ ಹಾಗೂ ವಿಡಿಯೋ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹದ ಅಧೀಕ್ಷಕ ಐ.ಜಿ.ಮ್ಯಾಗೇರಿ, ರಾಮ, ಮಂದಿರ ಅಂತೆಲ್ಲ ಸಲ್ಲದ ವಿಷಯಗಳನ್ನು ಮುಂದಿಟ್ಟುಕೊಂಡು ಆರೋಪಿ ಸುಳ್ಳು ಹೇಳುತ್ತಿದ್ದಾನೆ. ಮಹಾರಾಷ್ಟ್ರ ಮೂಲದ ಸದರಿ ಖೈದಿ, ಅಲ್ಲಿನ ಜೈಲುಗಳಲ್ಲಿಯೂ ಇದೇ ರೀತಿ ವರ್ತಿಸಿದ ಕಾರಣಕ್ಕೆ ಆತನನ್ನು ನಮ್ಮ ಜೈಲಿಗೆ ವರ್ಗಾಯಿಸಿದ್ದಾಗಿ ವಿವರಿಸಿದ್ದಾರೆ.
ಜ.23 ರಂದು ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಆರೋಪಿತರು ಇತರರೊಂದಿಗೆ ಜಗಳ ಮಾಡಿದ್ದರು. ಇದರಿಂದಾಗಿ ಜೈಲಿನಲ್ಲಿ ಗಲಾಟೆ ನಿಯಂತ್ರಿಸಲು ಆರೋಪಿಯನ್ನು ಪ್ರತ್ಯೇಕ ಸೆಲ್ನಲ್ಲಿ ಇರಿಸಿದ್ದೇವೆ ಎಂದರು.
ಜೈಲಿನಿಲ್ಲಿ ಮೊಬೈಲ್ ನಿಷೇಧವಿದ್ದರೂ ಆರೋಪಿ ಮೊಬೈಲ್ನಲ್ಲಿ ವಿಡಿಯೋ ಮೂಲಕ ಹೇಳಿಕೆ ಬಿಡುಗಡೆ ಮಾಡಿದ್ದಾನೆ. ಆರೋಪಿಗೆ ಮೊಬೈಲ್ ಹೇಗೆ ಲಭ್ಯವಾಯ್ತು, ಜೈಲಿನ ಒಳಗೆ ಮೊಬೈಲ್ ಪ್ರವೇಶಿಸಿದ್ದು ಹೇಗೆ ಎಂಬೆಲ್ಲ ವಿಷಯಗಳ ಕುರಿತು ತನಿಖೆ ಮಾಡಲಾಗುತ್ತದೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.