ಅಕ್ರಮ ಆಸ್ತಿ ಗಳಿಕೆ: ಕೆಎಎಸ್ ಅಧಿಕಾರಿ ಡಾ.ಬಿ.ಸುಧಾ ಮನೆ ಸೇರಿದಂತೆ ಆರು ಕಡೆ ಎಸಿಬಿ ದಾಳಿ
Team Udayavani, Nov 7, 2020, 9:09 AM IST
ಬೆಂಗಳೂರು: ಈ ಹಿಂದೆ ವಿಶೇಷ ಭೂಸ್ವಾಧಿನಾಧಿಕಾರಿಯಾಗಿದ್ದ ಕೆಎಎಸ್ ಅಧಿಕಾರಿ ಡಾ.ಬಿ.ಸುಧಾ ಅವರ ಬೆಂಗಳೂರಿನ ಮನೆ ಸೇರಿದಂತೆ ಒಟ್ಟು ಆರು ಕಡೆಯಲ್ಲಿ ದಾಳಿ ನಡೆಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಮತ್ತು ಅವ್ಯವಹಾರ ಸಂಬಂಧ ದೂರುಗಳು ಕೇಳಿಬಂದ ಹಿನ್ನಲೆಯಲ್ಲಿ ಎಸಿಬಿ ಅಧಿಕಾರಿಗಳು ಇಂದು ಬೆಳಿಗ್ಗೆ ಬೆಂಗಳೂರು ಮತ್ತು ಉಡುಪಿ ಸೇರಿದಂತೆ ಒಟ್ಟು ಆರು ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರು ಕೊಡಿಗೇನಹಳ್ಳಿಯಲ್ಲಿರುವ ವಾಸದ ಮನೆ, ಸುಧಾ ಅವರಿಗೆ ಸಂಬಂಧಪಟ್ಟ ಯಲಹಂಕದ ಫ್ಲಾಟ್, ಬ್ಯಾಟರಾಯನಪುರದ ಪರಿಚಿತರ ಮನೆ, ಮೈಸೂರು ನಗರ ಶ್ರೀರಾಂ ಪುರದ ಪರಿಚಿತರ ಮನೆ, ಉಡುಪಿ ಜಿಲ್ಲೆಯ ಚಂತಾರ್ ತೆಂಕಬೆಟ್ಟಿನ ಪರಿಚಿತರ ಮನೆ ಮತ್ತು ಇವರು ಕರ್ತವ್ಯ ನಿರ್ವಹಿಸುತ್ತಿರುವ ಶಾಂತಿನಗರದ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಆಡಳಿತಾಧಿಕಾರಿ ಕಚೇರಿಯ ಮೇಲೆ ಎಸಿಬಿ ಅಧಿಕಾರಿಗಳು ಇಂದು ಬೆಳಿಗ್ಗೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.