ಆಗುಂಬೆ ಘಾಟಿ: ಭಾರಿ ವಾಹನ ಸಂಚಾರ ನಿಷೇಧ
Team Udayavani, Aug 17, 2019, 3:00 AM IST
ಶಿವಮೊಗ್ಗ: ಮಳೆಯಿಂದ ತೀರ್ಥಹಳ್ಳಿ-ಉಡುಪಿ ಮಾರ್ಗ ಮಧ್ಯದ ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿಯುವ ಸಂಭವ ಇರುವ ಹಿನ್ನೆಲೆ ಯಲ್ಲಿ ಅಧಿಕಭಾರ ಹೊತ್ತು ಸಾಗುವ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಭಾಗದಲ್ಲಿ ಮಳೆ ಹೆಚ್ಚಾಗಿರುವುದರಿಂದ ಗುಡ್ಡ ಕುಸಿಯುವ ಆತಂಕ ಎದುರಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕ ಭಾರದ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಬಿ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ಕಳೆದ ಮಳೆಗಾಲದಲ್ಲಿ ಗುಡ್ಡ ಕುಸಿದ ಪರಿಣಾಮ ಮೇನಲ್ಲಿ ಒಂದು ತಿಂಗಳು ಶಾಶ್ವತ ಕಾಮಗಾರಿಯ ಅನುಕೂಲಕ್ಕಾಗಿ ವಾಹನ ಸಂಚಾರ ನಿಷೇಧಿ ಸಲಾಗಿತ್ತು. ಕೆಲ ಸಮಯದ ಬಳಿಕ ಮಿನಿ ಬಸ್, ಜೀಪು, ವ್ಯಾನ್, ಕಾರು, ದ್ವಿಚಕ್ರ, ಎಲ್ಸಿವಿ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. 12 ಟನ್ಗಿಂತ ಕಡಿಮೆ ಇರುವ ವಾಹನಗಳಿಗೆ ಮಳೆಗಾಲ ಮುಗಿಯುವವರೆಗೆ ನಿಷೇಧ ಹೇರಲಾಗಿತ್ತು.