ಕೊಳಗೇರಿ ಅಭಿವೃದ್ದಿ ಮಂಡಳಿ ಅಧ್ಯಕ್ಷರಾಗಿ ಶಾಸಕ ಮಹೇಶ್ ಕುಮಠಳ್ಳಿ ನೇಮಕ
Team Udayavani, Jun 2, 2020, 3:36 PM IST
ಬೆಂಗಳೂರು: ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಅವರನ್ನು ಕೊಳಗೇರಿ ಅಭಿವೃದ್ದಿ ಮಂಡಳಿ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶಿಸಲಾಗಿದೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್- ಜೆಡಿಎಸ್ ಪಕ್ಷದಿಂದ ಬಿಜೆಪಿಗೆ ಸೇರ್ಪಡೆಯಾಗಿ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಅಥಣಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಮಹೇಶ್ ಕುಮಠಳ್ಳಿ ಅವರಿಗೆ ಯಾವುದೇ ಸಚಿವ ಸ್ಥಾನ ನೀಡಲಾಗಿರಲಿಲ್ಲ. ಸದ್ಯ ಮಹೇಶ್ ಕುಮಠಳ್ಳಿ ಅವರಿಗೆ ಕೊಳಗೇರಿ ಅಭಿವೃದ್ದಿ ಮಂಡಳಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ನಿಗಮ ಮಂಡಳಿ ನೇಮಕದ ಬಗ್ಗೆ ಪ್ರತಿಕ್ರಯಿಸಿದ ಕುಮಠಳ್ಳಿ, ಸಿಎಂ ಯಡಿಯೂರಪ್ಪ ಅವರ ತೀರ್ಮಾನ ನನಗೆ ಒಪ್ಪಿಗೆ ಇದೆ. ಯಾವುದೇ ಸ್ಥಾನಮಾನ ಕೊಡಿ ಅಂತ ಒತ್ತಾಯ ಮಾಡಿಲ್ಲ. ಸರ್ಕಾರ ಬರಲು ಒಂದು ವರ್ಷ ಏನೆಲ್ಲ ಸರ್ಕಸ್ ನಡೆಯಿತು ಅನ್ನೋದು ಗೊತ್ತಿದೆ. ಜನಪರ ಕೆಲಸ ಮಾಡಲು ಇಂತಹದೇ ಅಧಿಕಾರ ಬೇಕು ಅಂತ ಏನಿಲ್ಲ ಎಂದ ಅವರು, ಪಕ್ಷ ಸೇರ್ಪಡೆ ಆದ ಬಳಿಕ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಇಲ್ಲಿನ ಅಸಮಾಧಾನ ಪ್ರಶ್ನೆಯೇ ಇಲ್ಲ ಎಂದರು.
ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಬೆಳಗಾವಿ ಮತ್ತು ಕೆ ಗೋಪಾಲಯ್ಯ ಅವರಿಗೆ ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ಇಂದು ನೇಮಿಸಿಲಾಗಿದೆ. ರಮೇಶ್ ಜಾರಕಿಹೊಳಿಯವರ ಆಪ್ತ ಮಹೇಶ್ ಕುಮಠಳ್ಳಿಯವರಿಗೂ ಇಂದೇ ಅವರನ್ನು ಕೊಳಗೇರಿ ಅಭಿವೃದ್ದಿ ಮಂಡಳಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.