ದರ್ಗಾದ ಎಲ್ಲ ವಿಚಾರವೂ ತಿಳಿದಿತ್ತು
Team Udayavani, Jun 30, 2019, 3:03 AM IST
ಚಿಕ್ಕಮಗಳೂರು: ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾದ ಬಗ್ಗೆ ತಮಗೆ ತಿಳಿವಳಿಕೆ ಇರಲಿಲ್ಲ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ನಿವೃತ್ತ ನ್ಯಾ. ಎಚ್.ಎನ್. ನಾಗಮೋಹನ್ ದಾಸ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾದಲ್ಲಿನ ವಾಸ್ತವಾಂಶ ಅರಿಯಲು ರಾಜ್ಯ ಸರ್ಕಾರ ನೇಮಿಸಿದ್ದ ಸಮಿತಿ ಅಧ್ಯಕ್ಷನಾಗಿ ಇಲ್ಲಿಯ ಎಲ್ಲ ವಿಚಾರಗಳೂ ತಮಗೆ ತಿಳಿದಿತ್ತು. ಈ ಪ್ರದೇಶಕ್ಕೆ ಕುಟುಂಬಸ್ಥರು, ಸ್ನೇಹಿತರ ಜತೆ ಹಾಗೂ ಕೆಲವೊಮ್ಮೆ ಒಬ್ಬನೇ ಬಂದಿದ್ದೆ. ಹೀಗಾಗಿ ಈ ಪ್ರದೇಶದ ಬಗ್ಗೆ ತಮಗೇನೂ ತಿಳಿದಿರಲಿಲ್ಲ ಎಂಬ ಆರೋಪದಲ್ಲಿ ಹುರುಳಿಲ್ಲ ಎಂದರು.
ಐಡಿ ಪೀಠದಲ್ಲಿನ ವಾಸ್ತವಾಂಶ ಅರಿಯಲು ರಾಜ್ಯ ಸರ್ಕಾರ ಸಮಿತಿ ರಚಿಸಿ, 3 ಜನರನ್ನು ನೇಮಿಸಿತ್ತು. ಸಮಿತಿಯಲ್ಲಿದ್ದ 3 ಜನರೂ ರಾಜ್ಯದ ಬಗ್ಗೆ ಉತ್ತಮ ಚಿಂತನೆಯುಳ್ಳ, ಕಳಂಕವಿಲ್ಲದ ಅನುಭವಿಗಳಾಗಿದ್ದೆವು. ವಿವಾದಕ್ಕೆ ಸಂಬಂಧಿಸಿದ ಪ್ರತಿಯೊಬ್ಬರಿಗೂ ಬರವಣಿಗೆಯಲ್ಲಿ ತಮ್ಮ ವಿಚಾರ ತಿಳಿಸುವಂತೆ ಹೇಳಲಾಗಿತ್ತು. ಅಲ್ಲದೆ ವಿಚಾರಣೆಯನ್ನೂ ನಡೆಸಿ ಎಲ್ಲರ ಅಭಿಪ್ರಾಯಗಳನ್ನೂ ಪಡೆಯಲಾಗಿತ್ತು.
ನಂತರ ದಾಖಲೆಗಳನ್ನು ಪರಿಶೀಲಿಸಿ, ಸಮಗ್ರ ಅಧ್ಯಯನ ಮಾಡಿ, ವರದಿಯೊಂದನ್ನು ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿತ್ತು ಎಂದರು. ರಾಜ್ಯ ಸರ್ಕಾರ ಸಮತಿ ವರದಿ ಒಪ್ಪಿದೆ. ಈಗ ಕೆಲವರು ಇದರ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ವರದಿ ಕುರಿತು ಪ್ರತಿಕ್ರಿಯಿಸುವುದು ಸರಿಯಲ್ಲ. ನ್ಯಾಯಾಲಯ ಎಲ್ಲವನ್ನೂ ಪರಿಶೀಲಿಸಲಿದೆ ಎಂದರು.