ಯಾವುದೇ ಕ್ಷಣ ಮೈತ್ರಿ ಸರ್ಕಾರ ಪತನ: ಪುಟ್ಟಸ್ವಾಮಿ
Team Udayavani, Feb 4, 2019, 1:30 AM IST
ಹಾಸನ: ಸಮ್ಮಿಶ್ರ ಸರ್ಕಾರ ಕಳೆದ 7 ತಿಂಗಳಿಂದಲೂ ಅಸ್ಥಿರತೆಯ ನಡುವೆಯೇ ನಡೆದುಕೊಂಡು ಬಂದಿದ್ದು, ಯಾವುದೇ ಕ್ಷಣದಲ್ಲಾದರೂ ಪತನವಾಗಬಹುದು ಎಂದು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಸರ್ಕಾರ ಇದೆಯೇ ಎಂಬ ಅನುಮಾನ ಮೂಡಿದೆ. ಬಿಜೆಪಿ ಆಪರೇಷನ್ ಕಮಲ ಮಾಡುತ್ತಿಲ್ಲ. ಹೊಂದಾಣಿಕೆಯ ಕೊರತೆ ಯಿಂದ ಸರ್ಕಾರ ಬಿದ್ದು ಹೋಗಲಿದೆ. ಕಾಂಗ್ರೆಸ್ ಶಾಸಕರಿಗೆ ತಮ್ಮ ನಾಯಕರ ಬಗ್ಗೆಯೇ ನಂಬಿಕೆಯಿಲ್ಲ. ಶಾಸಕರನ್ನು ಭದ್ರ ವಾಗಿ ಇಟ್ಟುಕೊಳ್ಳಲಾಗದೆ ಹತಾಶರಾಗಿರುವ ಕಾಂಗ್ರೆಸ್ ನಾಯ ಕರು, ಬಿಜೆಪಿಯವರು ಆಪರೇಷನ್ ಕಮಲ ಮಾಡುತ್ತಿದ್ದಾ ರೆಂದು ಗೂಬೆ ಕೂರಿಸುತ್ತಿದ್ದಾರೆ. ಕಾಂಗ್ರೆಸ್ ಮೇಲೆ ಗೂಬೆ ಕೂರಿಸಲು ಕುಮಾರಸ್ವಾಮಿ ಅವರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ತಮ್ಮ ವೈಫಲ್ಯಗಳಿಂದ ಬಚಾವಾಗಲು ಸಿಎಂಗೆ ಉಳಿದಿರುವುದು ರಾಜೀನಾಮೆ ಒಂದೇ ದಾರಿ ಎಂದರು.
ಹಾಸನ ಲೋಕಸಭಾ ಕ್ಷೇತ್ರ ಜೆಡಿಎಸ್ ಕುಟುಂಬಕ್ಕೆ ಮೀಸಲಾಗಿದೆ. ಹಾಸನದಲ್ಲೊಬ್ಬ ಮೊಮ್ಮಗ, ಮಂಡ್ಯದಲ್ಲೊಬ್ಬ ಮೊಮ್ಮಗನನ್ನು ಚುನಾವಣೆಗೆ ನಿಲ್ಲಿಸುತ್ತೇನೆ ಎನ್ನುತ್ತಾರೆ. ಅವರಿಗೆ ಕುಟುಂಬ ರಾಜಕಾರಣ ಬಿಟ್ಟು ರಾಜ್ಯದ ಚಿಂತೆ ಇಲ್ಲ ಎಂದು ದೇವೇಗೌಡರ ಕುಟುಂಬದ ವಿರುದ್ಧ ಕಿಡಿಕಾರಿದರು.