ರಜೆ ಘೋಷಿಸಿದರೂ, ಕಚೇರಿ ತೆರೆದಿದ್ದ ಅಲ್ಪ ಸಂಖ್ಯಾತರ ನಿರ್ದೇಶನಾಲಯ
Team Udayavani, Jan 23, 2019, 12:29 AM IST
ಬೆಂಗಳೂರು: ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸರ್ಕಾರಿ ಕಚೇರಿಗಳಿಗೆ ಘೋಷಣೆ, ಮೂರು ದಿನ ಶೋಕಾಚರಣೆಗೆ ಆದೇಶ ಹೊರಡಿಸಿದ್ದರೂ, ರಾಜ್ಯ ಅಲ್ಪ ಸಂಖ್ಯಾತ ನಿರ್ದೇಶನಾಲಯ ಎಂದಿನಂತೆ ಕಚೇರಿ ತೆರೆದು ಕೆಲಸ ನಡೆಸಿದ್ದು ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರಿನ ವಿಶ್ವೇಶ್ವರಯ್ಯ ಟವರ್ನ 21 ನೇ ಮಹಡಿಯಲ್ಲಿರುವ ಅಲ್ಪಸಂಖ್ಯಾತ ನಿರ್ದೇಶನಾಲಯದ ಕಚೇರಿ ಮಂಗಳವಾರವೂ ತೆರೆದಿದ್ದು, ನಿರ್ದೇಶನಾಲಯದ ನಿರ್ದೇಶಕ ಅಕ್ರಂ ಪಾಷಾ ಕಚೇರಿಗೆ ಹಾಜರಾಗಿ ಎಂದಿನಂತೆ ಕಾರ್ಯ ನಿರ್ವಹಿಸಿದ್ದಾರೆ. ಸರ್ಕಾರದ ಆದೇಶ ಉಲ್ಲಂಘಿಸಿದ್ದ ಬಗ್ಗೆ ಪ್ರಶ್ನಿಸಿದ ಮಾಧ್ಯಮ ಪ್ರತಿನಿಧಿಗಳಿಗೂ ಹಾರಿಕೆಯ ಉತ್ತರ ನೀಡಿದ್ದಾರೆ.
ಇನ್ನೊಂದೆಡೆ ನಗರದ ಡೈರಿ ಸರ್ಕಲ್ ಬಳಿ ಇರುವ ಕ್ರೈಸ್ಟ್ ಕಾಲೇಜು ಕೂಡ ವಾರ್ಷಿಕೋತ್ಸವ ಕಾರ್ಯಕ್ರಮ ಹಮ್ಮಿ ಕೊಂಡಿದ್ದು, ಶಾಲೆ ತೆರೆದಿರುವ ಬಗ್ಗೆ ಪ್ರಶ್ನಿಸಲು ತೆರಳಿದ್ದ ಮಾಧ್ಯಮದವರ ಮೇಲೇ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ದಾಖಲಾಗಿದೆ.