ಖಾಸಗಿ ವಿವಿ ಕಾಯ್ದೆಗೆ ತಿದ್ದುಪಡಿ: ಶಿವಶಂಕರರೆಡ್ಡಿ
Team Udayavani, Jul 4, 2018, 6:00 AM IST
ವಿಧಾನಪರಿಷತ್ತು: ಖಾಸಗಿ ಕೃಷಿ ವಿವಿ ಸ್ಥಾಪನೆ ತಡೆಯಲು 2012ರಲ್ಲಿ ಜಾರಿಗೆ ಬಂದ ಖಾಸಗಿ ವಿಶ್ವವಿದ್ಯಾಲಯಗಳ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಕೃಷಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ ಹೇಳಿದರು.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಬಿಜೆಪಿಯ ಆಯನೂರು ಮಂಜುನಾಥ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವರು, ಕರ್ನಾಟಕ ವಿವಿಗಳ ಕಾಯ್ದೆಯಲ್ಲಿ ಖಾಸಗಿ ಕೃಷಿ ವಿವಿ ಸ್ಥಾಪನೆಗೆ ಅವಕಾಶವಿಲ್ಲ. ಆದರೆ, 2012ರಲ್ಲಿ ಜಾರಿಗೆ ತರಲಾದ ಖಾಸಗಿ ವಿವಿ ಕಾಯ್ದೆಯ ವಿಷಯಗಳ ಪಟ್ಟಿಯಲ್ಲಿ “ಕೃಷಿ ವಿಜ್ಞಾನ’ ವಿಷಯ ಸೇರಿದೆ. ಆದ್ದರಿಂದ ಈ ಗೊಂದಲ ನಿರ್ಮಾಣವಾಗಿದೆ. ಹಾಗಾಗಿ ಖಾಸಗಿ ವಿವಿ ಕಾಯ್ದೆಯ ವಿಷಯಗಳ ಪಟ್ಟಿಯಿಂದ “ಕೃಷಿ ವಿಜ್ಞಾನ’ ಪದ ತೆಗೆದುಹಾಕಲು ಕಾಯ್ದೆಗೆ ತಿದ್ದುಪಡಿ ತರಲಾಗುವುದು. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಯವರೊಂದಿಗೆ ಮಾತನಾಡಿದ್ದೇನೆ. ಪ್ರತಿಪಕ್ಷಗಳು ಸಹ ತಿದ್ದುಪಡಿ ತರಲು ಸಹಕರಿಸಬೇಕು ಎಂದು ಮನವಿ ಮಾಡಿದರು. ಅಗತ್ಯ ಬಿದ್ದರೆ ಮೋಡ ಬಿತ್ತನೆ ಪರಿಶೀಲನೆ: ಅಗತ್ಯ ಬಿದ್ದರೆ ಜುಲೈ 31ರ ನಂತರ ರಾಜ್ಯದಲ್ಲಿ ಮೋಡ ಬಿತ್ತನೆ ಬಗ್ಗೆ ಪರಿಶೀಲಿಸಲಾಗುವುದು ಎಂದು ಕೃಷಿ ಸಚಿವರು ತಿಳಿಸಿದರು.
ಪ್ರತಿಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ರಾಜ್ಯದಲ್ಲಿ ಕೆಲವು ಕಡೆ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಕೊರತೆಯಿದೆ. ಮೇ ತಿಂಗಳಲ್ಲಿ ಆದ ಮಳೆಯಿಂದ ಮಳೆಯಿಂದ ಬಿತ್ತನೆ ಕಾರ್ಯ ನಡೆದಿದೆ. ಆದರೆ, ಒಂದು ತಿಂಗಳಿಂದ ಮಳೆಯಿಲ್ಲ. ಸರ್ಕಾರ ನೆರವಿಗೆ ಬಂದರೆ ಶೇ.50ರಷ್ಟು ಬೆಳೆಯನ್ನಾದರೂ ರೈತರು ಉಳಿಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಮೋಡ ಬಿತ್ತನೆಯ ಚಿಂತನೆ ಸರ್ಕಾರದ ಮುಂದೆ ಇದೆಯಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವರು, ಜು.31ರವರೆಗೆ ರಾಜ್ಯದಲ್ಲಿ ಮಳೆ ಸ್ಥಿತಿಗತಿ ಆಧರಿಸಿ ಮೋಡಬಿತ್ತನೆ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.