ಎಲ್ಲಿಂದ ನೀರು ತರಲಿ ನೀವೇ ಹೇಳಿ: ಪರಮೇಶ್ವರ್
Team Udayavani, Jun 29, 2019, 3:05 AM IST
ಬೆಂಗಳೂರು: ಅತ್ತ ಶರಾವತಿ ಎಂದರೂ ವಿರೋಧ ಕೇಳಿ ಬರುತ್ತದೆ. ಇತ್ತ ಎತ್ತಿನಹೊಳೆ ಯೋಜನೆಗೂ ಆಕ್ರೋಶ ವ್ಯಕ್ತವಾಗುತ್ತದೆ. ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ.
ಹೀಗಿರುವಾಗ, ಬೆಳೆಯುತ್ತಿರುವ ಬೆಂಗಳೂರು ನಗರಕ್ಕೆ ನೀರನ್ನು ಎಲ್ಲಿಂದ ತರುವುದು, ನೀವೇ ಹೇಳಿ- ಇದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ವ್ಯಕ್ತಪಡಿಸಿದ ಅಸಹಾಯಕತೆ. ಆ ಮೂಲಕ 5 ವರ್ಷ ಹೊಸ ಅಪಾರ್ಟ್ಮೆಂಟ್ ನಿರ್ಮಾಣಕ್ಕೆ ನಿರ್ಬಂಧ ವಿಧಿಸುವ ಸರ್ಕಾರದ ಚಿಂತನೆಯನ್ನು ಅವರು ಸಮರ್ಥಿಸಿಕೊಂಡರು.
ಸುದ್ದಿಗಾರರ ಜತೆ ಮಾತನಾಡಿ, ಒಂದೊಂದು ಅಪಾರ್ಟ್ಮೆಂಟ್ನಲ್ಲಿ ಒಮ್ಮೇಲೆ ಮೂರ್ನಾಲ್ಕು ಸಾವಿರ ಮನೆಗಳು ತಲೆ ಎತ್ತುತ್ತವೆ. ಇವರಿಗೆಲ್ಲಾ ನೀರು ಪೂರೈಸಬೇಕು. ಈಗಾಗಲೇ ನಗರೀಕರಣ ಶೇ.30ರಷ್ಟು ಆಗಿದೆ. ಬೆಂಗಳೂರಿನಲ್ಲಂತೂ ಅಂತರ್ಜಲ ಮಟ್ಟ ಸಾವಿರ ಅಡಿ ಆಳಕ್ಕೆ ಹೋಗಿದೆ.
ಕಾವೇರಿ ಐದನೇ ಹಂತಕ್ಕೆ ಕೈಹಾಕಿದ್ದೇವೆ. ಬೇರೆ ಕಡೆಯಿಂದ ನೀರು ತರಲು ತೀವ್ರ ವಿರೋಧ ಕೇಳಿ ಬರುತ್ತದೆ. ಹಾಗಿದ್ದರೆ, ನಗರದಲ್ಲಿ ಬೆಳೆಯುತ್ತಿರುವ ಈ ಜನಸಂಖ್ಯೆಗೆ ನೀರು ಎಲ್ಲಿಂದ ತರುವುದು ಎಂದು ಪ್ರಶ್ನಿಸಿದರು. “ನೀರನ್ನು ಯಾರೂ ಸೃಷ್ಟಿ ಮಾಡಲು ಆಗುವುದಿಲ್ಲ’ ಎಂದರು.