Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ ಎಲ್ಲ ಹೋಂ ಸ್ಟೇ, ರೆಸಾರ್ಟ್ ಬಂದ್!
Team Udayavani, Apr 16, 2024, 2:59 PM IST
ಚಿಕ್ಕಮಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆ ಏಪ್ರಿಲ್ 26ರಂದು ಮತದಾನ ನಡೆಯಲಿರುವ ಕಾರಣ ಏ. 25 ಮತ್ತು 26 ರಂದು ಹೋಂ ಸ್ಟೇ, ರೇಸಾರ್ಟ್ ಬುಕಿಂಗ್ಗೆ ಅವಕಾಶ ನೀಡದಂತೆ ಚಿಕ್ಕಮಗಳೂರು ಜಿಲ್ಲೆಯ ಹೋಂ ಸ್ಟೇ, ರೇಸಾರ್ಟ್ ಮಾಲೀಕರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಮತದಾನದ ದಿನ ರಜೆಯಿರುವ ಕಾರಣ ವಾರಾಂತ್ಯದ ರಜೆಯ ಉಪಯೋಗ ಪಡೆದು ಜನರು ಪ್ರವಾಸಕ್ಕೆ ತೆರಳಿದರೆ ಮತದಾನ ಪ್ರಮಾಣ ಕಡಿಮೆಯಾಗಲಿದೆ. ಹೀಗಾಗಿ ಮತದಾನ ಪ್ರಮಾಣ ಹೆಚ್ಚಿಸಲು ಈ ಮೂಲಕ ನೆರವಾಗಬೇಕು ಎಂದು ಹೋಂ ಸ್ಟೇ, ರೇಸಾರ್ಟ್ ಮಾಲೀಕರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಚಿಕ್ಕಮಗಳೂರಿಗೆ ಅತಿ ಹೆಚ್ಚು ಪ್ರವಾಸಿಗರು ಬರುತ್ತಿರುವ ಹಿನ್ನೆಲೆ ಮತದಾನ ಪ್ರಕ್ರಿಯೆಯಿಂದ ಮತದಾರ ಹೊರಗುಳಿಯಬಾರದೆಂಬ ಉದ್ದೇಶದಿಂದ ಈ ಸೂಚನೆ ನೀಡಲಾಗಿದ್ದು, ಅತಿ ಹೆಚ್ಚು ಮತದಾನ ನಡೆಸೋ ಉದ್ದೇಶದಿಂದ ಬುಕ್ಕಿಂಗ್ ಕ್ಯಾನ್ಸಲ್ ಗೆ ಮನವಿ ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಹೋಂ ಸ್ಟೆ ಹಾಗೂ ರೇಸಾರ್ಟ್ ಮಾಲೀಕರಿಗೆ ಲಿಖಿತವಾಗಿ ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಮೀನಾ ನಾಗರಾಜ್ ಮನವಿ ಮಾಡಿದ್ದಾರೆ.