ರೈತರಿಗೆ ಅನ್ಯಾಯವಾದರೆ ಅಧಿಕಾರಕ್ಕೆ ಅಂಟಿಕೊಂಡು ಕೂರಲ್ಲ: ಬಿ ಎಸ್ ಯಡಿಯೂರಪ್ಪ
Team Udayavani, Sep 28, 2020, 1:13 PM IST
ಬೆಂಗಳೂರು: ರಾಜ್ಯದಲ್ಲಿ ರೈತರಿಗೆ ಅನ್ಯಾಯವಾಗಲು ನಾನು ಬಿಡುವುದಿಲ್ಲ. ಒಂದು ವೇಳೆ ರೈತರಿಗೆ ಅನ್ಯಾಯವಾದರೆ ಅಧಿಕಾರಕ್ಕೆ ಅಂಟಿಕೊಂಡು ಕುಳಿತುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
ರಾಜ್ಯಾದ್ಯಂತ ರೈತ ಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯುತ್ತಿರುವ ಹಿನ್ನಲೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರು ತಮ್ಮ ಉತ್ಪನ್ನಗಳು ಎಲ್ಲಿ ಬೇಕಾದರೂ ಮಾರಾಟ್ ಮಾಡಬಹುದು. ನಾವು ಎಪಿಎಂಸಿ ಮುಚ್ಚುತ್ತಿಲ್ಲ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದರು.
ಇದನ್ನೂ ಓದಿ:ರೈತರ ಕರೆಗಿಂದು ಕರ್ನಾಟಕ ಬಂದ್: ಹಲವೆಡೆ ಪ್ರತಿಭಟನೆ, ಬೆಂಗಳೂರಿನಲ್ಲಿ ರೈಲು ತಡೆಯತ್ನ
ನೀರಾವರಿ ಭೂಮಿಯನ್ನು ಖರೀದಿಸಿದವರು ಅದರಲ್ಲಿ ನೀರಾವರಿ ಕೃಷಿಯನ್ನೇ ಮಾಡಬೇಕು. ಇತರ ಚಟುವಟಿಕೆಗಳಿಗೆ ಉಪಯೋಗಿಸಬಾರದು. ಪರಿಶಿಷ್ಟ ಜಾತಿ ಮತ್ತು ಪಂಗಡದ ಭೂಮಿಯನ್ನು ಖರೀದಿಸಲು ಅವಕಾಶವಿಲ್ಲ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅನಾನುಕೂಲವಾಗದು ಎಂದರು.
ಕೃಷಿ ಜಮೀನನ್ನು ಕೈಗಾರಿಕೆಗಳಿಗೆ ಮಾರಾಟ ಮಾಡುವುದಿಲ್ಲ. ಆದರೆ ಅಭಿವೃದ್ದಿಗೆ ಕೈಗಾರಿಕೆಗಳ ಅಗತ್ಯವೂ ಇದೆ. ಯುವಜನರಿಗೆ ಉದ್ಯೋಗ ಸಿಗುತ್ತದೆ. ಬಂಜರು ಭೂಮಿಯನ್ನು ಮಾತ್ರ ಕೈಗಾರಿಕೆಗಳಿಗೆ ನೀಡಲಾಗುವುದು ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ರೈತರ ಅನುಕೂಲಕ್ಕಾಗಿ ಎಪಿಎಂಸಿ ಕಾಯ್ದೆ ಜಾರಿಗೆ ತಂದಿದ್ದು, ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದು. ಮುಂದೆ ಶೇ. 85 ರಷ್ಟು ರೈತರು ತಿದ್ದುಪಡಿ ಕಾಯ್ದೆ ಒಪ್ಪಿಕೊಳ್ಳಲಿದ್ದಾರೆ. ನಾನೂ ಪ್ರವಾಸ ಕೈಗೊಂಡು ಜನರ ಮನವೊಲಿಸುತ್ತೇನೆ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದರು.