ಬಂಡಾಯವನೇ “ಬಂಡವಾಳ’ ವಾಗಿಸಿಕೊಂಡ ಜೆಡಿಎಸ್
Team Udayavani, Feb 9, 2017, 3:45 AM IST
ಬೆಂಗಳೂರು: ಚುನಾವಣೆಗಳಲ್ಲಿ ಬಂಡಾಯ ಅಭ್ಯರ್ಥಿ ಸ್ಪರ್ಧೆಯಿಂದ ಪಕ್ಷದ ಅಧಿಕೃತ ಅಭ್ಯರ್ಥಿ ಸೋಲುಂಡ ನಿದರ್ಶನಗಳೇ ಹೆಚ್ಚು. ಆದರೆ, ರಾಜ್ಯ ವಿಧಾನಪರಿಷತ್ನ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯ ಸ್ಪರ್ಧೆ
ಯನ್ನೇ “ದಾಳ’ವಾಗಿಸಿ ಕೊಂಡು ಪ್ರತಿಸ್ಪರ್ಧಿ ಬಿಜೆಪಿಯ ಸಾಂಪ್ರದಾಯಿಕ ಮತಗಳನ್ನೇ ವಿಭಜಿಸುವ ತಂತ್ರದ ಮೂಲಕ ಜೆಡಿಎಸ್ ಗೆಲುವು ಧಕ್ಕಿಸಿಕೊಂಡಿದೆ.
ಜೆಡಿಎಸ್ನ ಬಂಡಾಯ ಅಭ್ಯರ್ಥಿ ಅಧಿಕೃತ ಅಭ್ಯರ್ಥಿಯ ಗೆಲುವಿಗೆ ಅಡ್ಡ ಗಾಲು ಹಾಕಲಿದ್ದಾರೆ ಎಂಬ ಬಿಜೆಪಿ ಲೆಕ್ಕಾಚಾರವನ್ನೇ ಬುಡಮೇಲು ಮಾಡಿ, ಜೆಡಿಎಸ್ ಬಂಡಾಯ ಅಭ್ಯರ್ಥಿಯೇ ಬಿಜೆಪಿಯ ಮತಗಳನ್ನು ಸೆಳೆಯುವಂತೆ ಚಾಣಾಕ್ಷತನದಿಂದ ರಣತಂತ್ರ ರೂಪಿಸಿ ಜಯ ಸಾಧಿಸುವ ಮೂಲಕ ಚುನಾವಣಾ ರಾಜಕೀಯಕ್ಕೆ ಜೆಡಿಎಸ್ ಹೊಸ ಸಂದೇಶ ರವಾನಿಸಿದೆ.
ಜೆಡಿಎಸ್ ಬಂಡಾಯ ಅಭ್ಯರ್ಥಿ ಅರವಿಂದ್ ದಾವಣಗೆರೆ ಸೇರಿದಂತೆ ತುಮಕೂರು ಚಿತ್ರದುರ್ಗ ಭಾಗಗಳಲ್ಲಿ ಜೆಡಿಎಸ್ ಮತ ಸೆಳೆಯುತ್ತಾರೆ ಎಂದು ಲೆಕ್ಕ ಹಾಕಲಾಗಿತ್ತು. ಆದರೆ, ಚುನಾವಣೆಯಲ್ಲಿ ಆಗಿದ್ದೇ ಬೇರೆ. ಮೂಲತಃ ಲಿಂಗಾಯತ ಸಮುದಾಯದವರಾದ ಹಾಲಿ ಜೆಡಿಎಸ್ ಶಾಸಕ ಎಚ್.ಎಸ್.ಶಿವಶಂಕರ್ ಅವರ ಸಹೋದರ ಎಚ್.ಎಸ್.ಅರವಿಂದ್ ಬಿಜೆಪಿಯ ಸಾಂಪ್ರದಾಯಿಕ ಮತಗಳನ್ನೇ ಸೆಳೆದು ತಮಗರಿವಿಲ್ಲದಂತೆ ಜೆಡಿಎಸ್ ಗೆಲುವಿನ ಹಾದಿ ಸುಗಮಗೊಳಿಸಿ ಬಿಜೆಪಿ ಅಭ್ಯರ್ಥಿಯ ಪರಾಭವಕ್ಕೆ ಕಾಣಿಕೆ
ನೀಡಿದರು.
ಜೆಡಿಎಸ್ನ ರೆಬಲ್ ಅಭ್ಯರ್ಥಿ ಅರವಿಂದ್ ಪಡೆದ ಮೊದಲ ಪ್ರಾಶಸ್ತ್ಯದ 700ಕ್ಕೂ ಹೆಚ್ಚು ಮತಗಳು ಬಿಜೆಪಿ ಸೇರಿದ ಮತಗಳು ಎಂದೇ ವಿಶ್ಲೇಷಿಸಲಾಗುತ್ತಿದೆ. ಈ ಮತಗಳು ಅರವಿಂದ್ ಬದಲು ಬಿಜೆಪಿ ಅಭ್ಯರ್ಥಿ ಬಸವರಾಜ್ಗೆ ಬಿದ್ದಿದ್ದರೆ ಜೆಡಿಎಸ್ನ ರಮೇಶ್ಬಾಬು ಸೋಲುವ ಸಾಧ್ಯತೆಯಿತ್ತು. ಈ ಮಧ್ಯೆ, ಚುನಾವಣೆಯಲ್ಲಿ ಹರಿಹರ ಶಾಸಕ ಎಚ್.ಎಸ್.ಶಿವಶಂಕರ್ ಸಹೋದರ ಎಚ್.ಎಸ್.ಅರವಿಂದ ಬಂಡಾಯ ವಾಗಿ ಸ್ಪರ್ಧಿಸಿದ್ದು ಜೆಡಿಎಸ್ಗೆ ದೊಡ್ಡ ತಲೆನೋವು ತಂದಿತ್ತು. ಖುದ್ದು ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅರವಿಂದ್ ಪರ ಇದ್ದಾರೆ. ರಮೇಶ್ಬಾಬು ದೇವೇಗೌಡರ ಅಭ್ಯರ್ಥಿ, ಅರವಿಂದ್ ಕುಮಾರಸ್ವಾಮಿ ಅಭ್ಯರ್ಥಿ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ, ಕೊನೆಯಲ್ಲಿ ಎಚ್.ಡಿ. ದೇವೇಗೌಡರು ಗೊಂದಲಕ್ಕೆ ಅವಕಾಶ ಕೊಡದಂತೆ ತಾಕೀತು ಮಾಡಿ, ಸಾಧ್ಯವಾ ದರೆ ಅರವಿಂದ್ ಮನವೊಲಿಸಿ ನಾಮಪತ್ರ ವಾಪಸ್ ಪಡೆಯಲು ತಿಳಿಸಿ. ಇಲ್ಲವೇ ಬಿಟ್ಟುಬಿಡಿ. ಆದರೆ, ರಮೇಶ್ಬಾಬು ಸೋಲಬಾರದು. ಇದು ನಮಗೆ ಪ್ರತಿಷ್ಠೆ, ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಅದರಂತೆ ಅರವಿಂದ್ ಜತೆ ಕುಮಾರಸ್ವಾಮಿಯವರೇ ಸಂಧಾನ ಮಾತುಕತೆ ನಡೆದರು. ಆದರೆ, ಅದು
ವಿಫಲವೂ ಆಯಿತು. ಆ ನಂತರ ಎಚ್ .ಡಿ.ಕುಮಾರಸ್ವಾಮಿ ರಮೇಶ್ಬಾಬು ಪರ ಪ್ರಚಾರ ಮಾಡಿದ್ದರು.
ಜತೆಗೆ, ಬಿಜೆಪಿ ನಾಯಕರಲ್ಲೂ ಒಗ್ಗಟ್ಟಿನ ಕೊರತೆ, ಯಡಿಯೂರಪ್ಪ- ಈಶ್ವರಪ್ಪ ಫೈಟ್, ಅಭ್ಯರ್ಥಿ ಬಸವರಾಜು ಯಡಿಯೂರಪ್ಪ ಪರ ಅಭ್ಯರ್ಥಿ ಎಂಬ ಅಂಶ, ಎಸ್.ಎಂ.ಕೃಷ್ಣ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದು ಇವೆಲ್ಲ ಅಂಶಗಳು ಚುನಾವಣೆ ಫಲಿತಾಂಶದ ಮೇಲೆ
ಪರಿಣಾಮ ಬೀರಿದ್ದಂತೂ ಹೌದು. ಒಟ್ಟಾರೆ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕು ಎಂದು ಈಗಿನಿಂದಲೇ ಸಿದಟಛಿತೆ ಆರಂಭಿಸಿರುವ ಜೆಡಿಎಸ್ಗೆ ರಾಜ್ಯ ವಿಧಾನಪರಿಷತ್ನ ಆಗ್ನೇಯ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಗೆಲುವು “ಟಾನಿಕ್’ ದೊರೆತಂತಾಗಿದೆ.
ಬಿಜೆಪಿ ಬಲ ಕುಸಿತ
ಉಪ ಚುನಾವಣೆಯಲ್ಲಿ ಜೆಡಿಎಸ್ ಗೆಲುವು ಸಾಧಿಸಿರುವುದರಿಂದ ವಿಧಾನಪರಿಷತ್ನಲ್ಲಿ ಬಿಜೆಪಿಯ ಬಲ ಒಂದು ಕಡಿಮೆಯಾಗಿದೆ. 24 ಸದಸ್ಯರನ್ನು ಹೊಂದಿದ್ದ ಬಿಜೆಪಿ 23 ಕ್ಕೆ ಇಳಿದಿದೆ. 13 ಸದಸ್ಯರನ್ನು ಹೊಂದಿದ್ದ ಜೆಡಿಎಸ್ 14 ಏರಿಕೆಯೊಂದಿಗೆ ಬಲ ಹೆಚ್ಚಿಸಿಕೊಂಡಿದೆ. ಉಳಿದಂತೆ ಪರಿಷತ್ನಲ್ಲಿ ಕಾಂಗ್ರೆಸ್ 30, ಸ್ವತಂತ್ರ ಸದಸ್ಯರು 5 ಮಂದಿಯಿದ್ದು, ಮೂರು ಸ್ಥಾನ ಖಾಲಿಯಿದೆ. ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ರಮೇಶ್ ಬಾಬು ಅವರ ಗೆಲುವು ಮುಂದಿನ ವಿಧಾನಸಭೆ ಚುನಾವಣೆಯ ದಿಕ್ಸೂಚಿ. ಮುಖ್ಯಮಂತ್ರಿ
ಸಿದ್ದರಾಮಯ್ಯ ಜೆಡಿಎಸ್ ಎಲ್ಲಿದೆ ಎಂದು ಕೇಳುತ್ತಿದ್ದರು. ಅವರಿಗೆ ಈ ಚುನಾವಣೆ ಫಲಿತಾಂಶ ಉತ್ತರ ನೀಡಿದೆ.
ಎಚ್.ಡಿ. ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷ
ಚುನಾವಣೆಯಲ್ಲಿ ಜೆಡಿಎಸ್ ಗೆಲುವು ರಾಜ್ಯ ಸರ್ಕಾರದ ಆಡಳಿತಕ್ಕೆ ಹಿಡಿದ ಕನ್ನಡಿ. ಕಾಂಗ್ರೆಸ್ ಅಭ್ಯರ್ಥಿಗೆ ಠೇವಣಿ ನಷ್ಟವಾಗಿದ್ದು, ಆಡಳಿತ ವಿರೋಧಿ ಅಲೆ ಇರುವುದು ಸ್ಪಷ್ಟವಾಗಿದೆ. ಈ ಫಲಿತಾಂಶದಿಂದ ಮುಂದಿನ ವಿಧಾನ ಸಭೆ ಚುನಾವಣೆ ಏನಿದ್ದರೂ ಜೆಡಿಎಸ್
ಮತ್ತು ಬಿಜೆಪಿ ನಡುವಿನ ಹೋರಾಟ ಎಂಬುದಕ್ಕೆ ದಿಕ್ಸೂಚಿಯಾಗಿದೆ.
ಜಗದೀಶ್ ಶೆಟ್ಟರ್ ಪ್ರತಿಪಕ್ಷ ನಾಯಕ
ಆಗ್ನೇಯ ಶಿಕ್ಷಕರ ಕ್ಷೇತ್ರ ದಲ್ಲಿ ಬಿಜೆಪಿ ಸೋಲಿಸಲು ತಂತ್ರ ರೂಪಿಸಿ ಅದರಲ್ಲಿ ಯಶಸ್ವಿ ಯಾಗಿದ್ದೇವೆ.
ಡಿ.ಕೆ. ಶಿವಕುಮಾರ್ ಇಂಧನ ಸಚಿವ