ಬಸವಣ್ಣವರ ಸಿದ್ಧಾಂತವೇ ಕಾಂಗ್ರೆಸ್ ಸಿದ್ಧಾಂತ: ಡಿಕೆಶಿ
Team Udayavani, May 3, 2022, 8:45 PM IST
ಬೆಂಗಳೂರು: ಬಸವಣ್ಣನವರ ಸಿದ್ಧಾಂತವೇ ಕಾಂಗ್ರೆಸ್ ಪಕ್ಷದ ಸಿದ್ಧಾಂತ. ನಾವು ಎಲ್ಲ ಧರ್ಮಗಳಿಗೂ ಗೌರವ ಕೊಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬಸವ ಜಯಂತಿ ಪ್ರಯುಕ್ತ ಬಸವೇಶ್ವರ ಪ್ರತಿಮೆಗೆ ಪುಷ್ಪ ಸಮರ್ಪಿಸಿ ರಂಜಾನ್ ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಅವರು,ಬಸವಣ್ಣನವರ ಜಯಂತಿ ಹಾಗೂ ರಂಜಾನ್ ಹಬ್ಬವನ್ನು ಆಚರಿಸುವ ದೇಶದ ಇತಿಹಾಸದ ಒಂದು ಪವಿತ್ರ ದಿನ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷವು ಎಲ್ಲ ಸಮುದಾಯದ ಆಚಾರ-ವಿಚಾರಗಳನ್ನು ಗೌರವಿಸುತ್ತೇವೆ. ರಾಜ್ಯದ ಉನ್ನತ ಅಭಿವೃದ್ಧಿಗೆ, ಸಾಮಾಜಿಕ ಸಾಮರಸ್ಯಕ್ಕೆ ಇದು ದಾರಿದೀಪ ಎಂದು ಹೇಳಿದರು.
ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕು. ಬಸವಣ್ಣನವರ ಮಾರ್ಗದರ್ಶನ, ವಚನಗಳು ಪ್ರತಿಯೊಂದು ಕುಟುಂಬಕ್ಕೆ, ಸಮಾಜಕ್ಕೆ ದಾರಿದೀಪ. ಎಲ್ಲರೂ ಒಟ್ಟಾಗಿ ಸಮರಸ್ಯದಿಂದ ಬದುಕು ನಡೆಸಬೇಕು ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ:ಚಾಮರಾಜನಗರ ಗುಡಿಸಲು ಮುಕ್ತ ಮಾಡುವುದೇ ಬಿಜೆಪಿ ಗುರಿ
ರಂಜಾನ್ ಹಬ್ಬದ ಪವಿತ್ರ ದಿನ. ಸಮಾಜದ ಶಾಂತಿಗಾಗಿ ಎಲ್ಲರೂ ಸಾಮೂಹಿಕ ಪ್ರಾರ್ಥನೆ ಮಾಡಿದ್ದೇವೆ. ಇಂದೇ ಬಸವಣ್ಣನವರ ಜಯಂತಿ ಕೂಡ ಬಂದಿದೆ. ಈ ವೈವಿಧ್ಯತೆಯೇ ನಮ್ಮ ದೇಶದ ದೊಡ್ಡ ಆಸ್ತಿ ಎಂದು ಹೇಳಿದರು.
ನಾನು ಮುಸ್ಲಿಂ ಸಮುದಾಯಕ್ಕೆ ಈದ್ ಮುಬಾರಕ್ ಶುಭಾಶಯಗಳನ್ನು ಸಲ್ಲಿಸಿದ್ದೇನೆ.
ನಿಮ್ಮ ಜೊತೆ ನಾವಿದ್ದೇವೆ, ನೀವು ನೋವು ಅನುಭವಿಸುತ್ತಿದ್ದು, ನಮಗೆ ದುಃಖವಾಗುತ್ತಿದೆ. ನಿಮ್ಮ ಭಾವನೆಗಳಿಗೆ, ವ್ಯವಹಾರಕ್ಕೆ ಸಮಸ್ಯೆಗಳಾಗುತ್ತಿವೆ. ಅದನ್ನು ನಿವಾರಿಸುವ, ನಿಮಗೆ ಶಕ್ತಿ ತುಂಬುವ ಕೆಲಸವನ್ನು ನಾವು ಮಾಡುತ್ತೇವೆ. ಪರಿಹಾರ ಹುಡುಕುತ್ತಿದ್ದೇವೆ. ಭಗವಂತ ನಿಮಗೆ ಮತ್ತು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಆಶಿಸುತ್ತೇನೆ ಎಂದು ಹೇಳಿದ್ದೇನೆ ಎಂದರು.