ಇನ್ನು ಮೂರು ತಿಂಗಳಲ್ಲಿ ಬಿಬಿಎಂಪಿ ಚುನಾವಣೆ: ಸೋಮಣ್ಣ
Team Udayavani, Jan 22, 2022, 5:50 AM IST
ಬೆಂಗಳೂರು: ಇನ್ನು ಮೂರು ತಿಂಗಳ ಒಳಗೆ ಬಿ.ಬಿ.ಎಂ.ಪಿ.ಚುನಾವಣೆ ನಡೆಸಲು ಸರ್ಕಾರ ಬದ್ದವಾಗಿದೆ ಎಂದು ವಸತಿ ಸಚಿವರಾದ ವಿ.ಸೋಮಣ್ಣ ಹೇಳಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ಅವರ 3ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಬಿಎಂಪಿ ಚುನಾವಣೆ ನಡೆಸುವ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚೆ ನಡೆಸಿದ್ದು, 3 ತಿಂಗಳಲ್ಲಿ ಬಿಬಿಎಂಪಿ ಚುನಾವಣೆ ನಡೆಸಲಾಗುವುದು ಎಂದು ಹೇಳಿದರು.
ಸಿದ್ದಗಂಗಾ ಶ್ರೀಗಳು ನಾಗರಿಕ ಸಮಾಜದಲ್ಲಿ ಅಂಧಕಾರ ತೊಲಗಿಸಿ, ವಿದ್ಯೆಯಂಬ ಬೆಳಕು ನೀಡಿದ, ದಾಸೋಹ ಮಹತ್ವ ವಿಶ್ವಕ್ಕೆ ಸಾರಿದರು. ಗುರುವಿನ ಗುಲಾಮನಾಗುವ ತನಕ ದೊರಯದಣ್ಣ ಮುಕುತಿ. ಸಿದ್ದಗಂಗಾ ಶೀಗಳ ಜೊತೆಯಲ್ಲಿ 45ವರ್ಷಗಳ ಕಾಲ ತಂದೆ ಮಗನ ಸಂಭಂದ ದಂತೆ ಇತ್ತು. ರಾಜಕೀಯ ಕ್ಷೇತ್ರದಲ್ಲಿ ಬೆಳಯಲು ಬಾಲಗಂಗಾಧರ ಸ್ವಾಮೀಜಿ , ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದವೆ ಕಾರಣ. ಬಾಲಗಂಗಾಧರನಾಥ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿಗಳು ಮಹಾನ್ ತಪಸ್ವಿಗಳು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿದರೆ ಉತ್ತಮ ಪ್ರಜೆಗಳಾಗಿ ಸಮಾಜದಲ್ಲಿ ಬದುಕಬಹುದು ಎಂದರು.
ಶಿವಕುಮಾರ ಸ್ವಾಮೀಜಿಗಳ ಅಂತಿಮ ಕ್ಷಣದಲ್ಲಿ ನೋಡಲು ಹೋದಾಗ ಸ್ವಾಮೀಜಿಗಳ ಕಿವಿಯಲ್ಲಿ ಸೋಮಣ್ಣರವರು ಬಂದಿದ್ದಾರೆ ಎಂದು ಹೇಳಿದಾಗ ಕಣ್ಣು ಬಿಟ್ಟು ನನ್ನನು ನೋಡಿದ ಕ್ಷಣ ಮರೆಯಲು ಸಾಧ್ಯವಿಲ್ಲ. ಶ್ರೀಗಳು ದೇಹತ್ಯಾಗ ಮಾಡಿದಾಗ ತುಮಕೂರಿನಲ್ಲಿ ಒಂದು ಹೂವು ಸಿಗುವುದಿಲ್ಲ ನನ್ನ ಕಾರಿನಲ್ಲಿ ಎರಡು ಮಲ್ಲಿಗೆ ಹಾರ ಶ್ರೀಗಳ ಕಾಲಿಗೆ ಸಮರ್ಪಿತವಾಯಿತು ಕಾಕತಳೀಯವೋ, ಪವಾಡವೋ ತಿಳಿಯದು ನಿಷ್ಕಲ್ಮಶ ಪ್ರೀತಿಗೆ ಸಿಕ್ಕ ಗೌರವ ಎಂದು ನಾನು ತಿಳಿದುಕೊಂಡಿದ್ದೇನೆ ಎಂದರು.
ಇದನ್ನೂ ಓದಿ:ಬಿಜೆಪಿ-ಜೆಡಿಎಸ್ಗೆ ಸಿದ್ಧಾಂತವಿಲ್ಲ; ಸಿದ್ದರಾಮಯ್ಯ ಆಕ್ರೋಶ
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಅರುಂದತಿನಗರದಲ್ಲಿ ಕನಕಭವನ ನಿರ್ಮಾಣ ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಐ.ಎ.ಎಸ್ ಐ.ಪಿ.ಎಸ್. ತರಬೇತಿ ಕೇಂದ್ರ ಮತ್ತು ಮಾನಸನಗರದಲ್ಲಿ 295ಹಾಸಿಗೆ ಸಾಮ್ಯರ್ಥವುಳ್ಳ ಆಸ್ಪತ್ರೆ ನಿರ್ಮಾಣ. ಕರ್ನಾಟಕ ರಾಜ್ಯ ಸರ್ಕಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರು ವಿದ್ಯಾಸಿರಿ ಯೋಜನೆ 2ಲಕ್ಷ 48ಸಾವಿರ ವಿದ್ಯಾರ್ಥಿಗಳಿಗೆ 2ಸಾವಿರ ರೂಪಾಯಿ ಸಹಾಯಧನ ಮತ್ತು ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ನಗರದ ಅಭಿವೃದ್ದಿಗೆ 6000ಸಾವಿರ ಕೋಟಿ ರೂಪಾಯಿ ಅನುದಾನ ನೀಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿ.ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಶೈಲಜಾ ಸೋಮಣ್ಣ ಮತ್ತು ಗೋವಿಂದರಾಜನಗರ ಮಂಡಲ ಬಿ.ಜೆ.ಪಿ.ಅಧ್ಯಕ್ಷರಾದ ವಿಶ್ವನಾಥಗೌಡ ,ನಿಕಟಪೂರ್ವ ಬಿ.ಬಿ.ಎಂ.ಪಿ.ಸದಸ್ಯರುಗಳಾದ ದಾಸೇಗೌಡರು,ಕೆ.ಉಮೇಶ್ ಶೆಟ್ಟಿ ,ಮೋಹನ್ ಕುಮಾರ್, ಕನ್ನಡ ಪರ ಹೋರಾಟಗಾರ ಪಾಲನೇತ್ರ, ಕೊಳಚೆ ನಿರ್ಮೂಲನ ಮಂಡಳಿ ನಿರ್ದೇಶಕ ಕ್ರಾಂತಿ ರಾಜು, ಬಿ.ಜೆ.ಪಿ.ಮುಖಂಡರಾದ ರಾಜಪ್ಪರವರು ಹಾಜರಿದ್ದರು.