ಬೆಂಗಳೂರಿನಲ್ಲಿ ಕುಡಿಯುವ ನೀರು ಇತರ ಉದ್ದೇಶಕ್ಕೆ ಬಳಸಿದರೆ 5 ಸಾ.ರೂ. ದಂಡ
Team Udayavani, Mar 8, 2024, 11:26 PM IST
ಬೆಂಗಳೂರು: ನಗರದಲ್ಲಿ ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕೆ ಬಳಸುವುದನ್ನು ನಿಷೇಧಿಸಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಆದೇಶ ಹೊರಡಿಸಿದೆ. ಆದೇಶ ಉಲ್ಲಂಘಿಸಿ ದರೆ 5 ಸಾವಿರ ರೂ. ದಂಡ ವಿಧಿಸಲಾಗು ವುದು ಎಂದು ಎಚ್ಚರಿಕೆ ಕೊಟ್ಟಿದೆ.
ವಾಹನಗಳ ಸ್ವಚ್ಛತೆ, ಕೈತೋಟ, ಕಟ್ಟಡ ನಿರ್ಮಾಣ, ಕಾರಂಜಿಯಂತಹ ಆಕರ್ಷಕ ವ್ಯವಸ್ಥೆಗೆ, ಸಿನೆಮಾ ಮಂದಿರ ಮತ್ತು ಮಾಲ್ಗಳಲ್ಲಿನ ಕುಡಿಯುವ ನೀರಿನ ಹೊರತು ಇನ್ನಿತರೆ ಬಳಕೆಗೆ, ರಸ್ತೆ ನಿರ್ಮಾಣ ಮತ್ತು ಸ್ವಚ್ಛತೆಗೆ ಬಳಸುವುದನ್ನು ನಿಷೇಧಿಸಲಾಗಿದೆ.
ಈ ನಿಷೇಧ ಆದೇಶ ಉಲ್ಲಂಘಿಸಿದರೆ 5 ಸಾವಿರ ರೂ. ದಂಡ ವಿಧಿಸಲಾಗುವುದು. ಈ ಉಲ್ಲಂಘನೆಯು ಮರುಕಳಿಸಿದಲ್ಲಿ ದಂಡದ ಮೊತ್ತ 5 ಸಾವಿರ ರೂ. ಜತೆಗೆ ಪ್ರತಿ ದಿನಕ್ಕೆ ಹೆಚ್ಚುವರಿಯಾಗಿ 500 ರೂ. ದಂಡ ಹಾಕಲಾಗುವುದು ಎಂದು ಮಂಡಳಿ ಅಧ್ಯಕ್ಷ ಡಾ| ವಿ.ರಾಮ್ ಪ್ರಸಾತ್ ಮನೋಹರ್ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.
ಆದೇಶ ಜಾರಿ ಹೇಗೆ?
-ಮೀಟರ್ ರೀಡರ್ಸ್, ವಾಟರ್ ರೀಡರ್ಸ್ಗಳಿಂದ ಗಸ್ತು
-ಕಾವೇರಿ ನೀರು ದುರುಪಯೋಗದ ಬಗ್ಗೆ ಪರಿಶೀಲನೆ
-ಸಿಕ್ಕಿಬಿದ್ದವರಿಗೆ ಸ್ಥಳದಲ್ಲೇ 5 ಸಾವಿರ ರೂ. ದಂಡ
ಆದೇಶ ಜಾರಿ ಪ್ರಕ್ರಿಯೆ ಹೇಗೆ?
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮೀಟರ್ ರೀಡರ್ಸ್, ವಾಟರ್ ರೀಡರ್ಸ್, ವಾಟರ್ ಇನ್ಸ್ಪೆಕ್ಟರ್ಸ್ ಅವರ ವ್ಯಾಪ್ತಿಗೊಳಪಟ್ಟ ಪ್ರದೇಶಗಳಲ್ಲಿ ಗಸ್ತು ತಿರುಗಿ ಕಾವೇರಿ ನೀರನ್ನು ನಿಷೇಧಿತ 6 ಕೆಲಸಕ್ಕೆ ಬಳಸುತ್ತಾರೆಯೇ ಎಂಬುದನ್ನು ಪರಿಶೀಲಿಸುತ್ತಾರೆ. ಆ ವೇಳೆ ಸಿಕ್ಕಿಬಿದ್ದರೆ ದಂಡ ವಿಧಿಸುತ್ತಾರೆ. ಇನ್ನು ಸಾರ್ವಜನಿಕರು ಮನೆಗಳಲ್ಲಿ ಕಾವೇರಿ ನೀರು ಎಷ್ಟು ಪ್ರಮಾಣದಲ್ಲಿ ಬಳಸುತ್ತಿದ್ದಾರೆ ಎಂಬುದನ್ನೂ ಇವರು ಪರಿಶೀಲಿಸುತ್ತಾರೆ. ಕಾವೇರಿ ನೀರು ಪೋಲು ಮಾಡುತ್ತಿರುವುದು ಕಂಡು ಬಂದರೆ ಸಾರ್ವಜನಿಕರು ಮೊಬೈಲ್ನಲ್ಲಿ ವೀಡಿಯೋ ಮಾಡಿ ಸಾಕ್ಷ್ಯ ಸಮೇತ 1916ಕ್ಕೆ ಮಾಹಿತಿ ನೀಡುವುದನ್ನು ಪರಿಗಣಿಸಲಾಗುವುದು. ಎಲ್ಲ ಮನೆಗಳಲ್ಲೂ ನೀರು ಪೋಲು ಮಾಡುತ್ತಾರೆಯೇ ಎಂಬುದನ್ನು ಪತ್ತೆಹಚ್ಚುವುದು ಕಷ್ಟ ಎಂದು ಜಲಮಂಡಳಿ ಮುಖ್ಯ ಅಭಿಯಂತರ ಬಿ.ಸುರೇಶ್ “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ಕಾವೇರಿ ನೀರಿನ ಬಗ್ಗೆ ಬೆಂಗಳೂರಿನ ಜನರಲ್ಲಿ ಜಾಗೃತಿ ಮೂಡಿಸಲು ಈ ಆದೇಶ ಜಾರಿ ಮಾಡಲಾಗಿದೆ. ಇದರಿಂದ ಜನರಿಗೆ ನೀರಿನ ಬಗ್ಗೆ ಅರಿವು ಮೂಡುತ್ತದೆ. ಜಲಮಂಡಳಿ ವೆಬ್ಸೈಟ್ಗಳಲ್ಲಿ ಎಲ್ಲ ಎಂಜಿನಿಯರ್ಗಳ ನಂಬರ್ ಇದೆ. ನೀರು ಪೋಲು ಮಾಡುತ್ತಿರುವ ಬಗ್ಗೆ ದಾಖಲೆ ಸಿಕ್ಕಿದರೆ ಮಾತ್ರ ದಂಡ ವಿಧಿಸಲಾಗುವುದು. ಎಲ್ಲ ಮನೆಗಳ ಮೇಲೆ ನಿಗಾ ಇಡುವುದು ಅಸಾಧ್ಯ.
-ಬಿ.ಸುರೇಶ್, ಮುಖ್ಯ ಪ್ರಧಾನ ಅಭಿಯಂತ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್