BJP ಇಂದು ರಾಜ್ಯಕ್ಕೆ ಅಮಿತ್ ಶಾ ಚುನಾವಣೆ ತಯಾರಿ ಆರಂಭ
Team Udayavani, Feb 10, 2024, 7:20 AM IST
ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕ್ಲಸ್ಟರ್ವಾರು ಸಭೆ ಗಳನ್ನು ನಡೆಸಲಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಶನಿವಾರ ಹಾಗೂ ರವಿವಾರ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಅವರು ಮೈಸೂರಿನಿಂದ ಲೋಕಸಭಾ ಚುನಾವಣೆಗಾಗಿ ತಯಾರಿ ಆರಂಭಿಸಲಿದ್ದಾರೆ.
ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ರಾದ ಬಳಿಕ ಪದಾಧಿಕಾರಿಗಳ ಸಹಿತ ವಿವಿಧ ಜವಾಬ್ದಾರಿಗಳನ್ನು ಹಂಚಿಕೆ ಮಾಡಿದ್ದು, ಅದರ ಬೆನ್ನಲ್ಲೇ ಪ್ರತೀ ಲೋಕಸಭಾ ಕ್ಷೇತ್ರಕ್ಕೂ ಪ್ರಭಾರಿ, ಸಹಪ್ರಭಾರಿಗಳನ್ನು ನೇಮಕ ಮಾಡಲಾಗಿದೆ. ಅಲ್ಲದೆ ಲೋಕಸಭಾ ಕ್ಷೇತ್ರಗಳ ಕ್ಲಸ್ಟರ್ ರಚಿಸಿ, ಪ್ರತೀ ಕ್ಲಸ್ಟರ್ಗೂ ಓರ್ವ ಸಂಚಾಲಕರನ್ನೂ ನೇಮಿಸಿದೆ. ಈಗಾಗಲೇ ಸಂಘನಾತ್ಮಕ ಕಾರ್ಯಗಳು ಆರಂಭವಾಗಿದ್ದು, ಮುಂದಿನ ಕಾರ್ಯಯೋಜನೆಗಳು ಅಮಿತ್ ಶಾ ಮಾರ್ಗದರ್ಶನದಲ್ಲಿ ರೂಪುಗೊಳ್ಳಲಿವೆ.
ಶಿವರಾತ್ರೀಶ್ವರ ಜಾತ್ರೆಯಲ್ಲಿ ಭಾಗಿ
ಶನಿವಾರ ರಾತ್ರಿ ಮೈಸೂರಿಗೆ ಆಗಮಿಸಲಿರುವ ಅಮಿತ್ ಶಾ ಅವರು ಫೆ. 11ರ ಬೆಳಗ್ಗೆ 11 ಗಂಟೆಗೆ ಚಾಮುಂಡಿ ಬೆಟ್ಟದಲ್ಲಿ ದೇವರ ದರ್ಶನ ಮಾಡಿ, ವಿಶೇಷ ಪೂಜೆ ನೆರವೇರಿಸಲಿದ್ದಾರೆ. ಬಳಿಕ ಮಂಡಕಳ್ಳಿಯಿಂದ ಹಲಿಕಾಪ್ಟರ್ ಮೂಲಕ ಮಧ್ಯಾಹ್ನ 12ರ ವೇಳೆಗೆ ಸುತ್ತೂರಿಗೆ ಭೇಟಿ ನೀಡಿ ಶಿವರಾತ್ರೀಶ್ವರ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಮಠದಲ್ಲೇ ಪ್ರಸಾದ ಭೋಜನ ಸ್ವೀಕರಿಸಿ, ಅಪರಾಹ್ನ 2 ಗಂಟೆಗೆ ಸುತ್ತೂರಿನಿಂದ ಹೊರಟು ಮತ್ತೆ ಮೈಸೂರಿಗೆ ಆಗಮಿಸಲಿದ್ದಾರೆ.
ಕ್ಲಸ್ಟರ್ ಮಟ್ಟದ ಸಭೆ, ಪ್ರಮುಖರ ಸಭೆ
ಅಪರಾಹ್ನ 2.30ರ ಅನಂತರ ಬಿಜೆಪಿ ಪ್ರಮುಖರೊಂದಿಗೆ ಸರಣಿ ಸಭೆಗಳನ್ನು ನಡೆಸಲಿದ್ದು, ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಲೋಕಸಭಾ ಕ್ಷೇತ್ರಗಳ ಸಭೆ ನಡೆಯಲಿವೆ. ಮುಂದಿನ ಯೋಜನೆಗಳ ಕುರಿತು ಶಾ ಮಾರ್ಗದರ್ಶನ ನೀಡಲಿದ್ದಾರೆ. ಮಂಡ್ಯ ಸಂಸದೆ ಸುಮಲತಾ ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ರವಿ ವಾರದ ಸಭೆಯಲ್ಲಿ ಅಮಿತ್ ಶಾ ಎದುರು ಮಂಡ್ಯ ಲೋಕಸಭಾ ಕ್ಷೇತ್ರದ ಮಾಹಿತಿ ವಿನಿಮಯವೂ ಆಗಲಿದೆ. ಅಲ್ಲದೆ ಜೆಡಿಎಸ್ ಕಣ್ಣಿಟ್ಟಿರುವ ಹಾಸನ ಲೋಕಸಭಾ ಕ್ಷೇತ್ರ ಕುರಿತೂ ಚರ್ಚೆ ಗಳು ನಡೆಯಲಿವೆ. ಅನಂತರ ಪಕ್ಷದ ಪ್ರಮುಖರೊಂದಿಗೆ ಕೂಡ ಸಭೆ ನಡೆಸಿ ಸಂಜೆ 4.30ರ ಅನಂತರ ಗುಜರಾತ್ನತ್ತ ಪ್ರಯಾಣ ಬೆಳಸಲಿದ್ದಾರೆ.
ಮೈಸೂರು ಕ್ಲಸ್ಟರ್ ಅನಂತರ ಉಳಿದ 7 ಕ್ಲಸ್ಟರ್ಗಳಲ್ಲೂ ಅಮಿತ್ ಶಾ ಸಭೆಗಳನ್ನು ನಡೆಸಲಿದ್ದು, ಫೆ. 17 ಮತ್ತು 18ರಂದು ದಿಲ್ಲಿ ಯಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯ ಕಾರಿಣಿ ಸಭೆಯ ಬಳಿಕ ಕರ್ನಾಟಕಕ್ಕೆ ಹೆಚ್ಚು ಸಮಯವನ್ನು ನೀಡುವ ಸಾಧ್ಯತೆಗಳಿವೆ.
ಬಿಜೆಪಿ ಸಂಸದರಿಗೆ ವಿಪ್: ಮಹತ್ವದ ಘೋಷಣೆ?
ಹೊಸದಿಲ್ಲಿ: ಶನಿವಾರಕ್ಕೆ ಒಂದು ದಿನದ ಮಟ್ಟಿಗೆ ಸಂಸತ್ ಅಧಿವೇಶನ ವಿಸ್ತರಣೆಯಾಗಿದ್ದು, ಎಲ್ಲ ಸದಸ್ಯರು ಹಾಜರು ಇರುವಂತೆ ಬಿಜೆಪಿ ವಿಪ್ ಹೊರಡಿಸಿದೆ.
ಹೀಗಾಗಿ ಪ್ರಧಾನಿ ಮೋದಿ ಮಹತ್ವದ ಘೋಷಣೆಯೇನಾದರೂ ಮಾಡಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ. ರಾಮಮಂದಿರ ಉದ್ಘಾಟನೆ ನಿಮಿತ್ತ “ವಂದನಾ ನಿರ್ಣಯ’ ಕೈಗೊಳ್ಳುವ ಸಾಧ್ಯತೆ ಇದೆ ಎಂದೂ ಕೆಲವು ಮೂಲಗಳು ಹೇಳಿವೆ.