“ಬಿಎಸ್ವೈಗೆ ಸಂಸಾರ ನಡೆಸೋಕೆ ಬಿಡ್ತಿಲ್ಲ’
Team Udayavani, Jan 20, 2020, 3:03 AM IST
ಚನ್ನಗಿರಿ: ಯಡಿಯೂರಪ್ಪ ವಿವಾಹ ಮಾಡಿರುವ ಕೇಂದ್ರ ಸರ್ಕಾರ, ಅವರಿಗೆ ಸಂಸಾರ ಮಾಡುವುದಕ್ಕೂ ಬಿಡದೆ ತೊಂದರೆ ನೀಡುತ್ತಿದೆ ಎಂದು ಎಂಎಲ್ಸಿ ಸಿ.ಎಂ. ಇಬ್ರಾಹಿಂ ಲೇವಡಿ ಮಾಡಿದರು. ಬಸವ ತತ್ವ ಸಮ್ಮೇಳನಕ್ಕೆ ಆಗಮಿಸಿದ ವೇಳೆ ಸುದ್ದಿಗಾರರ ಜತೆ ಮಾತನಾಡಿ, ಯಡಿಯೂರಪ್ಪ ಅಧಿಕಾರಕ್ಕೆ ಬಂದಾಗಿನಿಂದಲೂ ಅವರಿಗೆ ಸಮರ್ಪಕವಾಗಿ ಅಧಿಕಾರ ನಡೆಸುವುದಕ್ಕೂ ಬಿಡದೆ ಅವರನ್ನು ಕಟ್ಟಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಹೆಸರಿಗೆ ಮಾತ್ರ ಸಿಎಂ ಆಗಿ ಕಾರ್ಯ ನಿರ್ವಹಿಸುತ್ತಿರುವ ಯಡಿಯೂರಪ್ಪ, ನರೇಂದ್ರ ಮೋದಿ ಮತ್ತು ಅಮಿತ್ ಶಾ ಕೈಗೊಂಬೆಯಾಗಿದ್ದಾರೆ ಎಂದರು.
ಎನ್ಆರ್ಸಿ, ಸಿಎಎ ಹಿಂದುಳಿದ ವರ್ಗಕ್ಕೆ ದೊಡ್ಡ ಗಂಡಾಂತರವಾಗಿ ಪರಿಣಮಿಸಿದೆ. ಅಹಿಂದ ವರ್ಗವನ್ನು ಸಂಪೂರ್ಣವಾಗಿ ತಟಸ್ಥಗೊಳಿಸುವ ಉದ್ದೇಶ ಇದರ ಹಿಂದಿದೆ. ಚುನಾವಣೆ ವೇಳೆ ಸಂವಿಧಾನ ಬದಲಾವಣೆ ಕುರಿತಾಗಿ ಪ್ರಧಾನಿ ಮೋದಿ ಸಂಪುಟದ ಸಚಿವರು ಹೇಳಿದ್ದನ್ನು ಜನ ಇನ್ನೂ ಮರೆತಿಲ್ಲ. ಪೌರತ್ವ ಕಾಯ್ದೆಯಡಿ ಮುಂದಿನ ದಿನಗಳಲ್ಲಿ ಸಂವಿಧಾನವನ್ನು ಸಂಪೂರ್ಣವಾಗಿ ಬದಲಾಯಿಸಿರುವುದರಲ್ಲಿ ಸಂಶಯವಿಲ್ಲ ಎಂದು ಭವಿಷ್ಯ ನುಡಿದರು.