ಟಿಪ್ಪು ಪಠ್ಯ ರದ್ದು; ಸಮಿತಿ ರಚನೆಯ ನಂತರ ಚರ್ಚೆ
Team Udayavani, Nov 3, 2019, 3:00 AM IST
ಬೆಂಗಳೂರು: ಶಾಲಾ ಮಕ್ಕಳ ಇತಿಹಾಸ ಪಠ್ಯಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಕುರಿತಾದ ಪಠ್ಯವನ್ನು ತೆಗೆಯುವ ಕುರಿತಾಗಿ ಸಾಧಕ- ಬಾಧಕ ಚರ್ಚಿಸಲು ಸಮಿತಿಯೇ ಇಲ್ಲ. ಪಠ್ಯದಲ್ಲಿ ಟಿಪ್ಪು ಇತಿಹಾಸವನ್ನು ತೆಗೆಯುವ ಕುರಿತು ಚರ್ಚಿಸಲು ನ.7ರಂದು ಕರ್ನಾಟಕ ಪಠ್ಯಪುಸ್ತಕ ಮಂಡಳಿಯು, ಪಠ್ಯಪುಸ್ತಕ ಸಮಿತಿಯ ಸಭೆ ಕರೆದಿದೆ. ಆದರೆ, ಸಮಿತಿಯೇ ಇಲ್ಲದೆ ಇರುವುದರಿಂದ ಹೊಸ ಸಮಿತಿ ರಚನೆಯ ನಂತರವಷ್ಟೇ ಸಭೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದೆ.
ಈ ಕುರಿತು ಸ್ಪಷ್ಟನೆ ನೀಡಿದ ಶಿಕ್ಷಣ ಸಚಿವ ಸುರೇಶ್ಕುಮಾರ್, ಕರ್ನಾಟಕ ಪಠ್ಯ ಪುಸ್ತಕ ಸಂಘದೊಂದಿಗೆ ಮಾತುಕತೆ ನಡೆಸಿ, ಸಮಿತಿ ರಚನೆ ಮಾಡಿದ ಬಳಿಕವೇ ಈ ವಿಷಯವನ್ನು ಚರ್ಚಿಸಲಾಗುವುದು. ನ.7ರಂದು ಸಭೆ ಇರುವುದರಿಂದ ಇನ್ನೂ ನಾಲ್ಕು ದಿನಗಳಿವೆ. ಅಷ್ಟರೊಳಗೆ ಸಮಿತಿ ರಚಿಸಲಾಗುವುದು ಎಂದು ಹೇಳಿದರು.ಸದ್ಯ ಯಾವುದೇ ರೀತಿಯಲ್ಲಿ ಪಠ್ಯವನ್ನು ಪರಿಷ್ಕರಣೆ ಮಾಡುತ್ತಿಲ್ಲ. ಹೀಗಾಗಿ, ಯಾವುದೇ ಸಮಿತಿಗಳು ಅಸ್ತಿತ್ವದಲ್ಲಿ ಇಲ್ಲ. ಈ ಹಿಂದೆ ಪ್ರೊ.ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ಪಠ್ಯಪುಸ್ತಕ ಪರಿಷ್ಕರಣೆಗೆ ಸಮಿತಿ ರಚನೆ ಮಾಡಲಾಗಿತ್ತು. ಬಳಿಕ, ಯಾವುದೇ ಸಮಿತಿ ರಚನೆ ಮಾಡಿಲ್ಲ ಎಂದರು.