ಕೇಂದ್ರದ ಬೆಂಬಲ ಬೆಲೆ ರೈತರ ಹಾದಿ ತಪ್ಪಿಸುವ ತಂತ್ರ
Team Udayavani, Jun 3, 2020, 7:06 AM IST
ಬೆಂಗಳೂರು: ಕೇಂದ್ರ ಸರ್ಕಾರ 14 ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿ ಇದರಿಂದ ರೈತರ ಆದಾಯ ದುಪ್ಪಟ್ಟಾಗುತ್ತದೆ ಎಂದು ಹೇಳಿಕೊಳ್ಳುತ್ತಿರುವುದು ರೈತರನ್ನು ದಾರಿ ತಪ್ಪಿಸುವ ತಂತ್ರ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ರೈತರ ಬೆಳೆಯ ಉತ್ಪಾದನಾ ವೆಚ್ಚಕ್ಕೆ ಶೇ.50ರಷ್ಟು ಲಾಭವನ್ನು ಸೇರಿಸಿ ಕನಿಷ್ಠ ಬೆಂಬಲ ಬೆಲೆ ನೀಡುತ್ತೇವೆಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದರು.
ಆದರೆ, ಉತ್ಪಾದನಾ ಲೆಕ್ಕ ದಲ್ಲಿಯೇ ಪ್ರಧಾನಿ ಮೋಸ ಮಾಡಿದ್ದಾರೆ. ಕೃಷಿ ತಜ್ಞ ಸ್ವಾಮಿನಾಥನ್ ಅವರ ವರದಿ ಪ್ರಕಾರ ಸಿ-2 ಉತ್ಪಾದನಾ ವೆಚ್ಚವೆಂದರೆ ಬೀಜ ಗೊಬ್ಬರ, ಹೊರ ಕೂಲಿಯ ಜೊತೆ ಭೂ ಸವಕಳಿ ವೆಚ್ಚ, ಹೂಡಿದ ಬಂಡವಾಳದ ಮೇಲಿನ ಬಡ್ಡಿ, ರೈತನ ಕುಟುಂಬದ ಕೂಲಿಯನ್ನೂ ಪರಿಗಣಿಬೇಕು. ಎರಡು ಪಟ್ಟು ಆದಾ ಯ ನೀಡುವುದು ಎಂದರೆ ಉತ್ಪಾದನಾ ವೆಚ್ಚದ ಎರಡು ಪಟ್ಟು ಆದಾಯ ನೀಡಬೇಕೆಂದು ಸ್ವಾಮಿನಾಥನ್ ವರದಿಯಲ್ಲಿ ಹೇಳಿದ್ದಾರೆ.
ಕೇಂದ್ರ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆ ವರದಿಯಲ್ಲಿ ಹೇಳಿರುವಂತೆ ಯೋಗ್ಯ ಬೆಲೆಯೇ? ಕೊರೊನಾ ಸಂದರ್ಭದಲ್ಲಿ ರೈತರ ಉತ್ಪಾದನಾ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಅದನ್ನು ಗಮನದಲ್ಲಿಟ್ಟುಕೊಂಡು ಬೆಂಬಲ ಬೆಲೆ ಹೆಚ್ಚಿಸದೆ ರೈತರಿಗೆ ಮೋಸ ಮಾಡಿದೆ. ಉದ್ಯಮಿಗಳು ಸಾವಿರಾರು ಕೋಟಿ ಸಾಲ ಮನ್ನಾ ಮಾಡುವ ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯ ಮಾಡಿದರೂ ಮನ್ನಾ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.