CT Ravi ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ರಮೇಶ್ ಬಾಬು
Team Udayavani, Mar 26, 2024, 7:35 PM IST
ಬೆಂಗಳೂರು: ದಲಿತ ಸಮುದಾಯಕ್ಕೆ ಸೇರಿರುವ ಸಚಿವ ಶಿವರಾಜ ತಂಗಡಗಿ ಅವರ ಮೇಲೆ ಬಿಜೆಪಿ ನಾಯಕರು ದಾಳಿ ನಡೆಸುತ್ತಿದ್ದಾರೆ.
ಉದ್ದೇಶಪೂರ್ವಕವಾಗಿ ದಲಿತರ ಮೇಲೆ ವಾಗ್ಧಾಳಿ ನಡೆಸುವುದು ಬಿಜೆಪಿಯ ತಂತ್ರ. ಇದು ಅವರ ಸಂಸ್ಕೃತಿ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರ ವಿರುದ್ಧ ಅಸಾಂವಿಧಾನಿಕ ಪದ ಬಳಸಿರುವ ಸಿ.ಟಿ.ರವಿ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ತಿಳಿಸಿದರು.
ಸಿ.ಟಿ.ರವಿ ಬಳಸಿರುವ ಪದ ಸಂಘ- ಪರಿವಾರದಿಂದ ಬಂದಿರುವ ಬಳುವಳಿ. ಕೇಂದ್ರ ಸರ್ಕಾರದ ವೈಫಲ್ಯಗಳನ್ನು ತಂಗಡಗಿ ಅವರು ಪ್ರಶ್ನಿಸುತ್ತಿರುವ ಕಾರಣ ಅವರ ಮೇಲೆ ದಾಳಿ ಮಾಡಲಾಗುತ್ತಿದೆ. ಇದು ಬಿಜೆಪಿಯ ಷಡ್ಯಂತ್ರ. ತಂಗಡಗಿ ಅವರನ್ನು ಸುಳ್ಳು ಆರೋಪದಲ್ಲಿ ಸಿಲುಕಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ.