ಕಾಂಗ್ರೆಸ್ ಹೈಕಮಾಂಡ್ ದೇವೇಗೌಡರಿಗೆ ಅವಕಾಶ ಕೊಡಬೇಕು: ಕೆ.ಎಚ್.ಮುನಿಯಪ್ಪ
Team Udayavani, Jun 3, 2020, 3:44 PM IST
ಬೆಂಗಳೂರು: ಮಾಜಿ ಪ್ರಧಾನಿ ಎಚ್ ಡಿ ದೇವೇ ಗೌಡ ಅವರಿಗೆ ರಾಜ್ಯ ಸಭೆಗೆ ಸ್ಪರ್ಧೆ ಮಾಡಲು ಕಾಂಗ್ರೆಸ್ ಹೈಕಮಾಂಡ್ ಅವಕಾಶ ಕೊಡಬೇಕು ಎಂದು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಹೇಳಿದರು.
ಈ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್- ಜೆಡಿಎಸ್ ಇತ್ತೀಚೆಗೆ ಮೈತ್ರಿ ಮಾಡಿಕೊಂಡಿದ್ದೆವು. ಈಗಲೂ ಅಂತಹ ಅವಕಾಶವಿದೆ. ದೇವೇಗೌಡರು ಹಿಂಬಾಗಿಲ ಮೂಲಕ ಹೋದವರಲ್ಲ, ಅವರೊಬ್ಬ ಅಪ್ಪಟ ರೈತ ಹೋರಾಗಾರ. ಹೈಕಮಾಂಡ್ ಅವರಿಗೆ ಅವಕಾಶ ಮಾಡಿಕೊಟ್ಟರೆ ಉತ್ತಮ. ಅವರೊಬ್ಬ ಪ್ರಧಾನಿಯಾಗಿದ್ದವರು. ಅಂತವರಿಗೆ ನಮ್ಮ ಹೈಕಮಾಂಡ್ ಅವಕಾಶ ನೀಡಬೇಕು ಎಂದು ಮಾಜಿ ಪ್ರಧಾನಿಯ ರಾಜ್ಯಸಭೆ ಪ್ರವೇಶಕ್ಕೆ ಮುನಿಯಪ್ಪ ಸಮರ್ಥಿಸಿದರು.
ರಾಜ್ಯ ಸಭೆಗೆ ಖರ್ಗೆ ಅವರ ಸ್ಪರ್ಧೆಯನ್ನೂ ಮುನಿಯಪ್ಪ ಬೆಂಬಲಿಸಿದರು. ಮಲ್ಲಿಕಾರ್ಜುನ ಖರ್ಗೆ ದಲಿತ ಸಮುದಾಯದ ಪ್ರಶ್ನಾತೀತ ನಾಯಕರು. ಅವರಿಗೆ ಟಿಕೆಟ್ ನೀಡಲು ಯಾರಾದರೂ ವಿರೋಧ ಮಾಡುತ್ತಾರಾ ಎಂದರು.
ರಾಜ್ಯನಾಯಕರು ಹೈಕಮಾಂಡ್ ಗೆ ಪತ್ರ ಕಳುಹಿಸುತ್ತಾರೆ. ಎಲ್ಲವನ್ನೂ ವಿಚಾರಿಸಿ ಹೈಕಮಾಂಡ್ ನಿರ್ಧರಿಸುತ್ತದೆ. ಮಲ್ಲಿಕಾರ್ಜುನ ಖರ್ಗೆಯವರು ಹಿರಿಯರು, ಹರಿಪ್ರಸಾದ್, ರಾಜೀವ್ ಗೌಡ ಯಾರೇ ಆಗಲಿ, ನಾವು ಸಲಹೆಯನ್ನ ಕೊಡುವುದಕ್ಕೂ ಅವಕಾಶವಿಲ್ಲ. ಹೈಕಮಾಂಡ್ ಎಲ್ಲವನ್ನೂ ನಿರ್ಧರಿಸುತ್ತದೆ ಎಂದರು.
ಟಿಕೆಟ್ ಕೊಡುವ ವೇಳೆ ಪಕ್ಷದ ನಿಷ್ಟಾವಂತರಿಗೆ ಕೊಡಬೇಕು. ನಮಗೆ ಎರಡು ಸೀಟು ಸಿಗುವ ವಿಶ್ವಾಸವಿದೆ. ಸಾವಿರಾರು ಮಂದಿ ಅವಕಾಶ ವಂಚಿತರೂ ಇದ್ದಾರೆ. ಇಲ್ಲಿ ಯಾವ ಮಾನದಂಡ ಇಟ್ಕೊಳ್ತಾರೆ ಗೊತ್ತಿಲ್ಲ. ನಿಷ್ಟಾವಂತರನ್ನ ಗುರುತಿಸಿಕೊಡಬೇಕು. ಆಗ ಕಾರ್ಯಕರ್ತರಿಗೆ ಹುಮ್ಮಸ್ಸು ಮೂಡುತ್ತದೆ. ಈ ಬಗ್ಗೆ ಅಧ್ಯಕ್ಷರ ಗಮನಕ್ಕೆ ತಂದಿದ್ದೇನೆ. ಪಕ್ಷ ವಿರೋಧಿ ಧೋರಣೆ ತೋರಿದವರಿಗೆ ನೀಡಬಾರದು ಎಂದು ಅಭಿಪ್ರಾಯಪಟ್ಟರು.
30 ವರ್ಷಗಳಿಂದ ದುಡಿದವರಿಗೆ ಅವಕಾಶ ಮಾಡಿಕೊಡಬೇಕು. ಸಿದ್ದರಾಮಯ್ಯ ಬೇರೆ ಅಲ್ಲ,ಡಿಕೆ ಶಿವಕುಮಾರ್ ಬೇರೆ ಅಲ್ಲ. ಇಬ್ಬರೂ ಸೇರಿಯೇ ತೀರ್ಮಾನ ತೆಗೆದುಕೊಳ್ಳಬೇಕು. ತೀರ್ಮಾನ ಮಾಡುವ ವೇಳೆ ರಾಜ್ಯದ ಜನ ನೋಡುತ್ತಿರುತ್ತಾರೆ. ಪಕ್ಷ ದ್ರೋಹಿಗೆ ಟಿಕೆಟ್ ಕೊಟ್ಟರೆ ಜನ ಛೀಮಾರಿ ಹಾಕುತ್ತಾರೆ ಎಂದ ಅವರು ಜಾತ್ಯಾತೀತ ಪಕ್ಷಗಳ ಸಹಾಯ ಅನಿವಾರ್ಯ. ಒಂದಲ್ಲ ಒಂದು ಕಾರಣಕ್ಕೆ ಉತ್ತಮ, ದೇವೇಗೌಡರಿಗೆ ಅವಕಾಶ ಮಾಡಿಕೊಡಬೇಕು. ಖರ್ಗೆ, ದೇವೇಗೌಡ ಇಬ್ಬರು ಹಿರಿಯ ನಾಯಕರು. ಇಬ್ಬರು ರಾಜ್ಯಸಭೆಯಲ್ಲಿ ಇದ್ದರೆ ಉತ್ತಮ ಎಂದರು.
ಕೋವಿಡ್-19 ವಿಚಾರದಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಪ್ರತಿಪಕ್ಷವಾಗಿ ನಾವು ಸಂಪೂರ್ಣ ಸಹಕಾರ ಕೊಟ್ಟಿದ್ದೇವೆ. ಕೇಂದ್ರ ರೈತರ ಸಾಲಮನ್ನಾ ಮಾಡಲಿಲ್ಲ. ರೈತರು ಬೆಳೆದ ಬೆಳೆಗೆ ಬೆಲೆಯಿಲ್ಲ. ಸರ್ಕಾರ ಹಾಪ್ ಕಾಮ್ಸ್ ಮೂಲಕ ಮಾರಾಟಮಾಡಬೇಕಿತ್ತು. ಆದರೆ ಸರ್ಕಾರ ಗಮನಹರಿಸಲಿಲ್ಲ ಎಂದರು.