ಸಚಿವ ಆನಂದ್ ಸಿಂಗ್ ವಜಾಗೊಳಿಸಿ: ವಿ.ಎಸ್.ಉಗ್ರಪ್ಪ ಆಗ್ರಹ
Team Udayavani, Sep 2, 2022, 10:15 PM IST
ಬೆಂಗಳೂರು: ವಿಜಯನಗರದಲ್ಲಿ ದಲಿತ ಕುಟುಂಬವೊಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಪ್ರಕರಣಕ್ಕೆ ಕಾರಣರಾಗಿರುವ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಸಚಿವ ಆನಂದ್ ಸಿಂಗ್ ಅವರು ವಿಜಯನಗರದಲ್ಲಿ ಸರಕಾರಿ ಜಮೀನು ಒತ್ತುವರಿ ಮಾಡಿಕೊಂಡು ಭವ್ಯ ಬಂಗಲೆ ನಿರ್ಮಿಸಿದ್ದಾರೆ. ರಾಜಕಾಲುವೆ ಒತ್ತುವರಿ ಸಂಬಂಧ ಮಾಧ್ಯಮಗಳಿಗೆ ದಾಖಲೆ ನೀಡಿದ ದಲಿತ ಸಮುದಾಯದ ಪೋಲಪ್ಪ ಎಂಬವರ ಕುಟುಂಬದರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಸಚಿವರ ಜೀವ ಬೆದರಿಕೆ ಮತ್ತು ಅವರ ಬೆಂಬಲಿಗರು ನೀಡುತ್ತಿರುವ ಕಿರುಕುಳದಿಂದ ಬೇಸತ್ತು ಈ ಕುಟುಂಬದ ಸದಸ್ಯರು ಆನಂದ ಸಿಂಗ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಜತೆಗೆ ಎಸ್ಪಿ ಕಚೇರಿ ಮುಂದೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಆದರೂ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ವೈ. ಘೋರ್ಪಡೆ, ಕಾಂಗ್ರೆಸ್ ಮುಖಂಡ ಬಸವರಾಜ್ ಹಿಟ್ನಾಳ್ ಮತ್ತಿತರರು ಉಪಸ್ಥಿತರಿದ್ದರು.
ಈ ಪ್ರಕರಣದ ಸಂಬಂಧ ಕೂಡಲೇ ಸಚಿವ ಆನಂದ್ ಸಿಂಗ್ ದಸ್ತಗಿರಿ ಆಗಬೇಕು. ಆತ್ಮಹತ್ಯೆಗೆ ಪ್ರಚೋದನೆ, ಕೊಲೆ ಬೆದರಿಕೆ ಪ್ರಕರಣ ದಾಖಲಿಸಬೇಕು. ಆನಂದ್ ಸಿಂಗ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಒಂದು ವೇಳೆ ಮುುಖ್ಯಮಂತ್ರಿಗಳು ಈ ಕೆಲಸ ಮಾಡದಿದ್ದರೆ ರಾಜ್ಯಪಾಲರು ಮಧ್ಯ ಪ್ರವೇಶ ಮಾಡಿ, ಆನಂದ್ ಸಿಂಗ್ ಅವರನ್ನು ವಜಾಗೊಳಿಸಬೇಕು. ಜತೆಗೆ ಈ ಪ್ರಕರಣವನ್ನು ರಾಜ್ಯದ ಹೈಕೋರ್ಟ್ ಉಸ್ತುವಾರಿಯಲ್ಲಿ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.