ರಿಜ್ವಾನ್ ಗೆಲ್ಲಿಸಿಕೊಂಡರೂ ಪರಿಷತ್ ಸ್ಥಾನ ಕಳೆದುಕೊಳ್ಳಲಿರುವ ಕಾಂಗ್ರೆಸ್
Team Udayavani, Dec 10, 2019, 3:03 AM IST
ಬೆಂಗಳೂರು: ಶಿವಾಜಿನಗರ ಕ್ಷೇತ್ರದಿಂದ ಕಾಂಗ್ರೆಸ್ನ ಅರ್ಷದ್ ರಿಜ್ವಾನ್ ಗೆಲುವು ಸಾಧಿಸಿದ್ದರೂ ಅವರಿಂದ ತೆರವಾಗುವ ವಿಧಾನಪರಿಷತ್ ಸ್ಥಾನ ಕಾಂಗ್ರೆಸ್ಗೆ ಸಿಗುವುದಿಲ್ಲ. ಕಾಂಗ್ರೆಸ್ ಪಕ್ಷದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರೋಷನ್ಬೇಗ್ ವಿರುದ್ಧ ಸೇಡು ತೀರಿಸಿಕೊಳ್ಳಲು ವಿರೋ ಧದ ನಡುವೆಯೂ ಸಿದ್ದ ರಾಮಯ್ಯ, ದಿನೇಶ್ ಗುಂಡೂರಾವ್ ಅವರು ರಿಜ್ವಾನ್ ಅರ್ಷದ್ಗೆ ಟಿಕೆಟ್ ಕೊಡಿಸಿದ್ದರು.
ಮಾಜಿ ಸಚಿವರಾದ ಜಮೀರ್ ಅಹಮದ್, ನಸೀರ್ ಅಹಮದ್ ಸಹಿತ ಎಲ್ಲರೂ ಒಟ್ಟಾಗಿ ಮುಸ್ಲಿಂ ಸಮುದಾಯದ ಮತ ಕಾಂಗ್ರೆಸ್ಗೆ ಬೀಳುವಂತೆ ಮಾಡು ವುದರ ಜತೆಗೆ ಹಿಂದೂ ಸಮುದಾಯದ ಮತಗಳನ್ನೂ ಸೆಳೆದು ರಿಜ್ವಾನ್ ಅರ್ಷದ್ರನ್ನು ಗೆಲ್ಲಿಸಿಕೊಂಡಿದ್ದಾರೆ. ಆದರೆ, ಅವರಿಂದ ತೆರವಾಗುವ ವಿಧಾನಪರಿಷತ್ ಸ್ಥಾನ ಕಾಂಗ್ರೆಸ್ಗೆ ಸಿಗದಂತಾಗಿದೆ.
ರಿಜ್ವಾನ್ ಅರ್ಷದ್ ವಿಧಾನಪರಿಷತ್ ಸದಸ್ಯತ್ವದ ಅವಧಿ 2022ರವರೆಗೂ ಇದೆ. ಆದರೆ, ಇದೀಗ ಅವರು ಶಾಸಕರಾಗಿ ಆಯ್ಕೆ ಆಗಿರುವು ದರಿಂದ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡ ಬೇಕು. ಒಬ್ಬರೇ ಪರಿಷತ್ ಸದಸ್ಯರ ಸ್ಥಾನ ತೆರವಾದರೆ ಆ ಸ್ಥಾನಕ್ಕೆ ಅಧಿಸೂಚನೆ ಹೊರಡಿಸಿದರೆ ವಿಧಾನಸಭೆಯಲ್ಲಿ ಬಿಜೆಪಿ ಸಂಖ್ಯಾಬಲ ಹೆಚ್ಚಾಗಿರುವ ಕಾರಣ ಬಿಜೆಪಿ ಅಭ್ಯರ್ಥಿಯೇ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ.
ಇದೀಗ ಉಪ ಮುಖ್ಯಮಂತ್ರಿಯಾಗಿರುವ ಲಕ್ಷ್ಮಣ ಸವದಿ ಅಥವಾ ಆರ್.ಶಂಕರ್ ಅವರನ್ನು ವಿಧಾನಪರಿಷತ್ಗೆ ಆಯ್ಕೆ ಮಾಡಬೇಕಾದ ಅನಿವಾರ್ಯತೆ ಬಿಜೆಪಿಗೆ ಇದೆ. ರಿಜ್ವಾನ್ ಅರ್ಷದ್ ಅವರಿಂದ ತೆರವಾಗುವ ಸ್ಥಾನ ಆರ್.ಶಂಕರ್ಗೆ ಸಿಗುತ್ತಾ ಅಥವಾ ಲಕ್ಷ್ಮಣ ಸವದಿ ಅವರಿಗೆ ಎಂಬುದು ಕಾದು ನೋಡಬೇಕು.