ವಿದ್ಯಾರ್ಥಿಗಳ ಖಿನ್ನತೆಗೆ ಕಾಲೇಜಲ್ಲೇ ಕೌನ್ಸೆಲಿಂಗ್!
ಪ್ರಾಧ್ಯಾಪಕರಿಗೆ ನಿಮ್ಹಾನ್ಸ್ನಿಂದಲೇ ತರಬೇತಿ
Team Udayavani, Oct 21, 2021, 6:30 AM IST
ಸಾಂದರ್ಭಿಕ ಚಿತ್ರ.
ಬೆಂಗಳೂರು: ಕೋವಿಡ್, ಕೌಟುಂಬಿಕ ಸಮಸ್ಯೆ ಮೊದಲಾದ ಕಾರಣಗಳಿಂದ ಖಿನ್ನತೆ ಎದು ರಿಸುತ್ತಿರುವ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲೇ ತಜ್ಞರಿಂದ ಕೌನ್ಸೆಲಿಂಗ್ ಸಿಗಲಿದೆ.
2021-22ನೇ ಸಾಲಿನ ಶೈಕ್ಷಣಿಕ ತರಗತಿಗಳು ಈಗಷ್ಟೇ ಆರಂಭವಾಗುತ್ತಿವೆ. ಕೋವಿಡ್ ಕಾರಣದಿಂದ ಕಳೆದ ಸಾಲಿನಲ್ಲಿ ಭೌತಿಕ ತರಗತಿ ಸರಿಯಾಗಿ ನಡೆದಿಲ್ಲ. ಇದರಿಂದ ಅನೇಕ ವಿದ್ಯಾರ್ಥಿಗಳು ನಾನಾ ರೀತಿಯ ಸಮಸ್ಯೆ ಒಳಗಾಗಿದ್ದಾರೆ. ಆದ್ದರಿಂದ ಕಾಲೇಜುಗಳಲ್ಲೇ ಕೌನ್ಸೆಲಿಂಗ್ ಮೂಲಕ ನೋವಿಗೆ ಪರಿಹಾರ ಕಂಡುಕೊಳ್ಳಲು ಕಾಲೇಜು ಶಿಕ್ಷಣ ಇಲಾಖೆಯಿಂದಲೇ ವ್ಯವಸ್ಥೆ ಮಾಡಲಾಗುತ್ತಿದೆ.
ಎನ್ಎಸ್ಎಸ್ ಘಟಕದ ಮೂಲಕ ಪ್ರತೀ ಕಾಲೇಜಿನಿಂದಲೂ ಒಬ್ಬರು ಅಥವಾ ಇಬ್ಬರು ಪ್ರಾಧ್ಯಾಪಕರಿಗೆ ನಿಮ್ಹಾನ್ಸ್ನಲ್ಲಿ ತರಬೇತಿ ನಡೆಯಲಿದೆ. ಬಳಿಕ ಅವರು ಕಾಲೇಜುಗಳಲ್ಲಿ ಕೌನ್ಸೆಲಿಂಗ್ ಆರಂಭಿಸಲಿದ್ದಾರೆ. ಅಲ್ಲದೆ ನಿಮ್ಹಾನ್ಸ್ನ ಜಿಲ್ಲಾ ಕೇಂದ್ರದ ಪ್ರತಿನಿಧಿಗಳ ಜತೆ ಸಂಯೋಜನೆ ನಡೆಸಿ, ಅವರನ್ನು ಕಾಲೇಜಿಗೆಕರೆಸಿ, ಅವರಿಂದ ಕೌನ್ಸೆಲಿಂಗ್ ಹಾಗೂ ವಿಶೇಷ ಉಪನ್ಯಾಸ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಗೆ ಅಗತ್ಯ
ನಿರಂತರ ಆನ್ಲೈನ್ ತರಗತಿ, ಕೌಟುಂಬಿಕ ಸಮಸ್ಯೆ, ಸ್ನೇಹಿತರೊಂದಿಗೆ ಬೆರೆಯಲು ಸಾಧ್ಯ ವಾಗದೇ ಇರುವುದು ಸೇರಿದಂತೆ ಅನೇಕ ಕಾರಣದಿಂದ ಕಾಲೇಜು ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗಿರುವ ಸಾಧ್ಯತೆಯಿದೆ.
ಇದನ್ನೂ ಓದಿ:ಮೈತ್ರಿಗೆ ನಾವೂ ಸಿದ್ಧ: ಅಮರಿಂದರ್ ಸ್ನೇಹ ಪ್ರಸ್ತಾವನೆಗೆ ಸೈ ಎಂದ “ಕಮಲ’
ಅದರಲ್ಲೂ ಕೋವಿಡ್ ಭಯ ಹಾಗೂ ಮನೆಯ ಸಮಸ್ಯೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿರುವ ವಿದ್ಯಾರ್ಥಿಗಳು ಅನೇಕರಿದ್ದಾರೆ. ಅಂಥವರನ್ನು ಗುರುತಿಸಿ, ಸೂಕ್ತ ರೀತಿಯ ಕೌನ್ಸೆಲಿಂಗ್ ನೀಡುವ ಅಗತ್ಯವಿದೆ.
ಎನ್ಇಪಿ ಸಲಹೆಯೂ ಸಿಗಲಿದೆ
ಕೌನ್ಸೆಲಿಂಗ್ ಜತೆಗೆ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಶೈಕ್ಷಣಿಕವಾಗಿ ಆಗುವ ಅನುಕೂಲತೆಗಳ ಬಗ್ಗೆಯೂ ಸಮಗ್ರ ಮಾಹಿತಿ ನೀಡಲಿದ್ದಾರೆ. ಪದವಿ ಮುಗಿದ ಅನಂತರ ಏನು ಮಾಡಬಹುದು, ಸಂಶೋಧನೆ, ಉದ್ಯೋಗ ಇತ್ಯಾದಿ ಎಲ್ಲರ ವಿವರವೂ ಕೌನ್ಸೆಲಿಂಗ್ ವೇಳೆ ಸಿಗಲಿದೆ.