ಮುಂದುವರಿದ ಕೋವಿಡ್ ಕಳವಳ: ರಾಜ್ಯದಲ್ಲಿಂದು 204 ಜನರಿಗೆ ಸೋಂಕು ದೃಢ
Team Udayavani, Jun 11, 2020, 5:31 PM IST
ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕಿನ ನಾಗಾಲೋಟ ಮತ್ತೆ ಮುಂದುವರಿದಿದೆ. ಇಂದು 204 ಜನರಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ. ಇಂದು ರಾಜ್ಯದಲ್ಲಿ 114 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ಪ್ರತಿ ದಿನ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದ್ದ ರಾಜ್ಯದಲ್ಲಿ ನಿನ್ನೆ 120 ಪ್ರಕರಣಗಳು ಕಂಡು ಬಂದಿದ್ದವು. ಕಳೆದ ಕೆಲವು ದಿನಗಳಿಗೆ ಹೋಲಿಕೆ ಮಾಡಿದಲ್ಲಿ ಇದು ಕಡಿಮೆ ಪ್ರಮಾಣವಾಗಿತ್ತು. ಇಂದು ಮತ್ತೆ 204 ಜನರಿಗೆ ಸೋಂಕು ತಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 6245 ಕ್ಕೆ ಏರಿಕೆಯಾಗಿದೆ.
ಶಿವಮೊಗ್ಗ ಜಿಲ್ಲೆಯ ಸ್ವಾಮೀಜಿಯೋರ್ವರಿಗೆ ಕೋವಿಡ್ ಸೋಂಕು ತಾಗಿರುವುದು ದೃಢವಾಗಿದೆ. ಹೀಗಾಗಿ ಮಠದ ಆವರಣವನ್ನು ಸೀಲ್ ಡೌನ್ ಮಾಡಲಾಗಿದೆ.
ಇಂದು ಯಾದಗಿರಿ ಜಿಲ್ಲೆಯಲ್ಲಿ ಅತೀ ಹೆಚ್ಚು 66 ಅಂದರೆ ಕೋವಿಡ್-19 ಸೋಂಕಿತರು ಪತ್ತೆಯಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 22 ಸೋಂಕಿತರು, ಬೆಂಗಳೂರು ನಗರ ಜಿಲ್ಲೆಯಲ್ಲಿ 17 ಜನರಿಗೆ ಕೋವಿಡ್ ಸೋಂಕು ತಾಗಿರುವುದು ದೃಢವಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ ಇಂದು 16 ಮಂದಿಗೆ ಸೋಂಕು ತಾಗಿರುವುದು ದೃಢವಾಗಿದೆ. ಇದರಿಂದ ಇಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 796ಕ್ಕೆ ಏರಿಕೆಯಾಗಿದೆ. ರಾಯಚೂರಿನಲ್ಲಿ 15 ಸೋಂಕು ಪ್ರಕರಣಗಳು ದೃಢವಾಗಿದ್ದು, ಬೀದರ್ ನಲ್ಲಿ 14 ಮತ್ತು ಶಿವಮೊಗ್ಗದಲ್ಲಿ 10 ಜನರಿಗೆ ಕೋವಿಡ್ ಸೋಂಕು ತಾಗಿರುವುದು ಪತ್ತೆಯಾಗಿದೆ.
ಉಳಿದಂತೆ ದಾವಣಗೆರೆ ಒಂಬತ್ತು, ಕೋಲಾರ ಆರು, ಮೈಸೂರು ಮತ್ತು ರಾಮನಗರದಲ್ಲಿ ತಲಾ ಐದು, ವಿಜಯಪುರದಲ್ಲಿ ನಾಲ್ಕು, ಬಾಗಲಕೋಟೆ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ ಮೂರು ಪ್ರಕರಣಗಳು ಪತ್ತೆಯಾಗಿದ್ದರೆ, ದಕ್ಷಿಣ ಕನ್ನಡ, ಹಾಸನ ಮತ್ತು ಧಾರವಾಡ ಜಿಲ್ಲೆಗಳಲ್ಲಿ ತಲಾ ಎರಡು ಸೋಂಕು ಪ್ರಕರಣಗಳು ಧೃಢವಾಗಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಇಂದು ತಲಾ ಒಂದು ಸೋಂಕು ಪ್ರಕರಣಗಳು ವರದಿಯಾಗಿದೆ.
ರಾಜ್ಯದಲ್ಲಿ ಇಂದು ಮೂವರು ಸೋಂಕಿತರು ಮರಣ ಹೊಂದಿದ್ದಾರೆ. ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಬೆಂಗಳೂರಿನ 35 ವರ್ಷದ ಪುರುಷ ಮತ್ತು ಬೆಂಗಳೂರಿನ 60 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಜೂನ್ 8ರಂದು ಮರಣ ಹೊಂದಿದ್ದ ರಾಯಚೂರಿನ ಮಹಿಳೆಗೆ ಸೋಂಕು ತಾಗಿರುವುದು ಇಂದು ದೃಢವಾಗಿದೆ.
ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 6245ಕ್ಕೆ ಏರಿಕೆಯಾಗಿದೆ. ಇಂದು ರಾಜ್ಯದಲ್ಲಿ 114 ಮಂದಿ ಬಿಡುಗಡೆಯಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇದುವರೆಗೆ ರಾಜ್ಯದಲ್ಲಿ ಒಟ್ಟು 2976 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 72 ಮಂದಿ ಸೋಂಕಿನ ಕಾರಣದಿಂದ ಮರಣ ಹೊಂದಿದ್ದರೆ, ರಾಜ್ಯದಲ್ಲಿ ಇಬ್ಬರು ಸೋಂಕಿತರು ಕೋವಿಡ್-19 ಅಲ್ಲದ ಅನ್ಯ ಕಾರಣದಿಂದ ಸಾವನ್ನಪ್ಪಿದ್ದಾರೆ.