ಲೆಹರ್ ಸಿಂಗ್ ಮನೇಲಿ ಸಿಕ್ಕ ಡೈರಿ ಸ್ಫೋಟ; BSYಗೆ 69 ಕೋಟಿ ಸಂದಾಯ
Team Udayavani, Feb 25, 2017, 6:58 PM IST
ಬೆಂಗಳೂರು:ಕಾಂಗ್ರೆಸ್ ಹೈಕಮಾಂಡ್ ಗೆ ರಾಜ್ಯ ಸರ್ಕಾರದ ಸಚಿವರಿಂದ ಕೋಟ್ಯಂತರ ರೂಪಾಯಿ ಕಪ್ಪ ಸಂದಾಯವಾಗಿದೆ ಎಂಬ ಆರೋಪಕ್ಕೆ ಕಾಂಗ್ರೆಸ್ ಮುಖಂಡರು ಪ್ರತಿಯಾಗಿ 2013ರಲ್ಲಿ ಬಿಎಸ್ ವೈ ಆಪ್ತ ಲೆಹರ್ ಸಿಂಗ್ ಮನೆ ಮೇಲೆ ಐಟಿ ದಾಳಿ ನಡೆಸಿದಾಗ ಸಿಕ್ಕಿದೆ ಎನ್ನಲಾದ ಡೈರಿಯನ್ನು ಶನಿವಾರ ಬಿಡುಗಡೆಗೊಳಿಸುವ ಮೂಲಕ ರಾಜ್ಯರಾಜಕಾರಣದಲ್ಲಿ ಡೈರಿ ಸಮರ ಮುಂದುವರಿದಂತಾಗಿದೆ.
ವಿಧಾನಸೌಧದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಕಾಂಗ್ರೆಸ್ ನಾಯಕರು ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ, ರಾಜ್ಯ ಬಿಜೆಪಿ ನಾಯಕರಿಂದಲೂ ಹೈಕಮಾಂಡ್ ಗೆ ಕಪ್ಪ ಕಾಣಿಕೆ ಸಲ್ಲಿಕೆಯಾಗಿದೆ ಎಂದು ಆರೋಪಿಸಿದರು. ಬಿಜೆಪಿ ಹೈಕಮಾಂಡ್ ಕೂಡ 391 ಕೋಟಿ ಕಪ್ಪ ಕಾಣಿಕೆ ಸ್ವೀಕರಿಸಿರುವ ಡೈರಿ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದಾಗಿ ಹೇಳಿದರು.
2013ರಲ್ಲಿ ಯಡಿಯೂರಪ್ಪ ಆಪ್ತ ಲೆಹರ್ ಸಿಂಗ್ ಮನೆ ಮೇಲೆ ಐಟಿ ದಾಳಿ ನಡೆಸಿದಿದ್ದಾಗ ಡೈರಿ ಸಿಕ್ಕಿತ್ತು ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿರುವ ಮಾಹಿತಿ ಪ್ರಕಾರ, ಕೋಟ್ಯಂತರ ರೂಪಾಯಿ ಬಿಜೆಪಿ ಹೈಕಮಾಂಡ್ ಗೆ ಸಂದಾಯವಾಗಿದೆ ಎಂಬ ಅಂಕಿ, ಅಂಶ ಇದೆ. ಡೈರಿ ಮಾಹಿತಿ ಪ್ರಕಾರ ಬಿಎಸ್ ವೈಗೂ 69 ಕೋಟಿ ರೂಪಾಯಿ ಸಂದಾಯವಾಗಿದೆ ಎಂಬ ಉಲ್ಲೇಖವಿದೆ ಎಂದು ತಿಳಿಸಿದರು.
ಡಿಸೆಂಬರ್ ನಿಂದಲೇ ಬಿಎಸ್ ಯಡಿಯೂರಪ್ಪ ಇದೇ ಆರೋಪ ಮಾಡುತ್ತ ಬಂದಿದ್ದರು. ಐಟಿ ದಾಳಿ ವೇಳೆ ಸಿಕ್ಕಿದ್ದ ಮಾಹಿತಿ ಗೌಪ್ಯವಾಗಿರಬೇಕೆಂದು ಇದೆ. ಆದರೆ ಆ ಮಾಹಿತಿ ಸೋರಿಕೆಯಾಗಿದ್ದು ಹೇಗೆ ಎಂದು ಪ್ರಶ್ನಿಸಿದರು.
3 ಡೈರಿಗಳ ಬಗ್ಗೆ ತನಿಖೆ ನಡೆಯಲಿ:
ಕೆ.ಗೋವಿಂದರಾಜು ಡೈರಿಯಲ್ಲಿ ಕಾಂಗ್ರೆಸ್ಸಿಗರ ಹೆಸರು, ಸಹರಾ ಬಿರ್ಲಾ ಡೈರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರಿದೆ, ಲೆಹರ್ ಸಿಂಗ್ ಡೈರಿಯಲ್ಲಿ ಬಿಜೆಪಿ ನಾಯಕರ ಹೆಸರಿದೆ. ಹಾಗಾಗಿ ಮೂರು ಡೈರಿಗಳ ಬಗ್ಗೆಯೂ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ನಡೆಸುವಂತೆ ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ.
ಐಟಿ ಇಲಾಖೆ ಮಾಹಿತಿ ನೀಡಲ್ಲ ಎಂದು ಸಿಎಂಗೆ ಹೇಳಿತ್ತು!
ಡೈರಿಯನ್ನು ತಾನು ನೋಡಿದ್ದೇನೆ ಎಂದು ರಾಷ್ಟ್ರೀಯ ವಾಹಿನಿ ಆಂಕರ್ ಹೇಳಿದ್ದಾರೆ. ಆದರೆ ಐಟಿ ದಾಳಿ ವೇಳೆ ಸಿಕ್ಕಿರುವ ಡೈರಿಯಲ್ಲಿನ ಮಾಹಿತಿ ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆದಿದ್ದರು. ಆದರೆ ಯಾವುದೇ ಕಾರಣಕ್ಕೂ ಮಾಹಿತಿ ಕೊಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಉತ್ತರ ನೀಡಿದ್ದರು. ಹಾಗಿದ್ದರೂ ರಾಷ್ಟ್ರೀಯ ಮಾಧ್ಯಮಗಳಿಗೆ ಡೈರಿ ಹೇಗೆ ಸಿಕ್ಕಿತು? ಇದೊಂದು ವ್ಯವಸ್ಥಿತ ಷಡ್ಯಂತ್ರವಲ್ಲದೇ ಇನ್ನೇನು ಎಂದು ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.