ಸುಪ್ರೀಂ ಕೋರ್ಟ್ಗೆ ಅನರ್ಹರ ಅರ್ಜಿ ಸಲ್ಲಿಕೆ ವಿಳಂಬ
Team Udayavani, Jul 31, 2019, 5:21 AM IST
ಬೆಂಗಳೂರು: ಶಾಸಕ ಸ್ಥಾನಕ್ಕೆ ಅನರ್ಹಗೊಂಡಿರುವ 17 ಶಾಸಕರು ಸ್ಪೀಕರ್ ರಮೇಶ್ ಕುಮಾರ್ ನೀಡಿರುವ ಆದೇಶವನ್ನು ಪುನರ್ ಪರಿಶೀಲಿಸಲು ಸೂಚಿಸು ವಂತೆ ವಿನಂತಿಸುವ ಅರ್ಜಿಯನ್ನು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಲು ವಿಳಂಬವಾಗುತ್ತಿದೆ.
ವಿಧಾನ ಸಭಾಧ್ಯಕ್ಷರಾಗಿದ್ದ ಕೆ.ಆರ್.ರಮೇಶ್ ಕುಮಾರ್ ಅವರು ಭಾನುವಾರ 14 ಶಾಸಕರ ಅನರ್ಹತೆ ಆದೇಶ ಹೊರಡಿಸಿದ ನಂತರ ಸೋಮವಾರವೇ ಸುಪ್ರೀಂ ಕೋರ್ಟ್ನಲ್ಲಿ ತಡೆಯಾಜ್ಞೆ ತರುವ ನಿಟ್ಟಿನಲ್ಲಿ ಅನರ್ಹಗೊಂಡ 17 ಶಾಸಕರು ಪ್ರಯತ್ನ ನಡೆಸಿದ್ದರು. ಆದರೆ, ಅವರಿಗೆ ವಿಧಾನಸಭೆಯಿಂದ ಅನರ್ಹಗೊಂಡಿರುವ ಅಧಿಕೃತ ಆದೇಶದ ಪ್ರತಿ ಮಂಗಳವಾರ ಸಂಜೆವರೆಗೂ ಸಿಗದಿದ್ದರಿಂದ ಅನರ್ಹರು ಸುಪ್ರೀಂ ಕೋರ್ಟ್ನಲ್ಲಿ ಮಂಗಳವಾರವೇ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ. ಅನರ್ಹಗೊಂಡಿರುವ ಬಹುತೇಕ ಶಾಸಕರು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಬಂಡಾಯ ಶಾಸಕರ ನಾಯಕ ರಮೇಶ್ ಜಾರಕಿಹೊಳಿ ಕೂಡ ಸೋಮವಾರ ಸುಪ್ರೀಂ ಕೊರ್ಟ್ಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸಿದ್ದಾರೆ. ಆದರೆ, ಎಚ್.ವಿಶ್ವನಾಥ್, ಪ್ರತಾಪ್ಗೌಡ ಪಾಟೀಲ್ ಹಾಗೂ ಬಿ.ಸಿ. ಪಾಟೀಲ್ ದೆಹಲಿಯಲ್ಲಿಯೇ ಉಳಿದುಕೊಂಡಿದ್ದು, ತಮ್ಮ ಪರ ವಾದ ನಡೆಸುತ್ತಿರುವ ಹಿರಿಯ ನ್ಯಾಯವಾದಿ ಮುಕುಲ್ ರೊಹಟಗಿ ಅವರ ಸಲಹೆ ಪಡೆದು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.