ಕಾಂಗ್ರೆಸ್ ಬೆಂಬಲಿಸದಿದ್ದರೆ ದೇವೇಗೌಡರು ಪ್ರಧಾನಿಯಾಗುತ್ತಿದ್ದರೇ : ಸಿದ್ದರಾಮಯ್ಯ
ಕುಮಾರಸ್ವಾಮಿ ನಮಗೆ ಬೆಂಬಲಿಸಲಿ...!
Team Udayavani, Jun 6, 2022, 1:50 PM IST
ಬೆಂಗಳೂರು : ರಾಜ್ಯಸಭಾ ಚುನಾವಣೆಯ ಕಾವು ತೀವ್ರವಾಗಿ ಏರಿದ್ದು, ಮೂರು ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದ್ದು, ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿಯನ್ನು ಜೆಡಿಎಸ್ ಬೆಂಬಲಿಸಲಿ ಎಂದು ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷ ಬೆಂಬಲಿಸದೆ ಹೋಗಿದ್ದರೆ ಹೆಚ್.ಡಿ.ದೇವೇಗೌಡ ಪ್ರಧಾನಿಯಾಗುತ್ತಿದ್ದರಾ? ದೇವೇಗೌಡರು ರಾಜ್ಯಸಭೆಗೆ ಸ್ಪರ್ಧಿಸಿದಾಗ ನಾವು ಅಭ್ಯರ್ಥಿಯನ್ನೇ ಹಾಕದೆ ಅವರನ್ನು ಗೆಲ್ಲಿಸಿಲ್ಲವೇ?ಜೆಡಿಎಸ್ ಪಕ್ಷದ 37 ಜನ ಶಾಸಕರಿದ್ದರೂ ನಾವು ಕುಮಾರಸ್ವಾಮಿಗೆ ಬೆಂಬಲ ನೀಡಿ ಅವರನ್ನು ಮುಖ್ಯಮಂತ್ರಿ ಮಾದಲಿಲ್ಲವೇ? ಇದು ನಮ್ಮ ಸೈದ್ಧಾಂತಿಕ ಬದ್ಧತೆ ಎಂದು ಟ್ವೀಟ್ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬಾರದು ಎಂಬ ಉದ್ದೇಶ ಇದ್ದರೆ ತಮ್ಮ ಪಕ್ಷದ ಅಭ್ಯರ್ಥಿಯನ್ನು ನಿವೃತ್ತಿಗೊಳಿಸಿ ನಮಗೆ ಬೆಂಬಲಿಸಲಿ, ನಮ್ಮದು ಜಾತ್ಯತೀತ ಪಕ್ಷ. ಕುಮಾರಸ್ವಾಮಿ ಅವರದ್ದೂ ಜಾತ್ಯತೀತ ಪಕ್ಷ ಅಲ್ಲವೇ ? ಎಂದು ಪ್ರಶ್ನಿಸಿದ್ದಾರೆ.
ಶುರುವಾದ ಲೆಕ್ಕಾಚಾರ
ಸಂಖ್ಯಾಬಲದಲ್ಲಿ ಬಿಜೆಪಿ 122 ಮತ ಹೊಂದಿದ್ದು, ಒಬ್ಬರ ಗೆಲುವಿಗೆ 45 ಎಂದರೆ ಇಬ್ಬರ ಆಯ್ಕೆ ಖಚಿತ.. ಉಳಿದ 32 ಮತ 3ನೇ ಅಭ್ಯರ್ಥಿಗೆ, ಜತೆಗೆ 2ನೇ ಪ್ರಾಶಸ್ತ್ಯದ ಮತ. ಬಿಜೆಪಿ ಪರ ಒಲವು ಹೊಂದಿರುವ ವಿಪಕ್ಷ ಶಾಸಕರ ಮತಗಳ ಮೇಲೆ ಕಣ್ಣು ಇಡಲಾಗಿದೆ.
ಕಾಂಗ್ರೆಸ್ ಸಂಖ್ಯಾಬಲ 71 ಆಗಿದ್ದು, ಒಬ್ಬರ ಗೆಲುವಿಗೆ 45 ಆದರೆ ಉಳಿದ ಮತ 26, ಎರಡನೇ ಅಭ್ಯರ್ಥಿಗೆ ಜತೆಗೆ ಎರಡನೇ ಪ್ರಾಶಸ್ತ್ಯ ಮತ. ಕಾಂಗ್ರೆಸ್ ಸೇರಲು ಬಯಸಿರುವ ಜೆಡಿಎಸ್ ಮತಗಳ ಮೇಲೆ ನಂಬಿಕೆ ಇಡಲಾಗಿದೆ.
ಜೆಡಿಎಸ್ ಸಂಖ್ಯಾಬಲ 32. ತನ್ನ ಅಭ್ಯರ್ಥಿಯನ್ನು ಗೆಲ್ಲಿಸಲು 13 ಮತಗಳ ಕೊರತೆ ಇದ್ದು, ಬಿಜೆಪಿ ಅಥವಾ ಕಾಂಗ್ರೆಸ್ನಿಂದ ಅಡ್ಡ ಮತ ಬಿದ್ದರಷ್ಟೇ ಗೆಲುವು ಸಾಧ್ಯವಾಗಿದೆ.