ಮಾರ್ಗಸೂಚಿ ಪಾಲಿಸದಿದ್ದರೆ ಅಪಾಯ ಖಚಿತ: ಡಾ| ಸುಧಾಕರ್
Team Udayavani, Apr 8, 2021, 10:35 PM IST
ಬೆಂಗಳೂರು: ಎಲ್ಲ ಪಕ್ಷಗಳೂ ರಾಜಕೀಯ ಸಭೆ, ಸಮಾರಂಭಗಳನ್ನು ಮಾರ್ಗಸೂಚಿಗಳ ಅನ್ವಯವೇ ನಡೆಸಬೇಕು. ಇಲ್ಲದಿದ್ದರೆ ಮುಂದಿನ ಆಗುಹೋಗುಗಳಿಗೆ ನಾವೆಲ್ಲರೂ ನೈತಿಕ ಹೊಣೆ ಹೊರಬೇಕಾಗುತ್ತದೆ ಎಂದು ಸಚಿವ ಡಾ| ಕೆ. ಸುಧಾಕರ್ ಹೇಳಿದರು.
ಬಿಬಿಎಂಪಿ, ಬೆಂಗಳೂರು ನಗರ ಜಿಲ್ಲೆ, ಗ್ರಾಮಾಂತರ ಜಿಲ್ಲೆಯ ಅಧಿಕಾರಿಗಳೊಂದಿಗೆ ವಿಕಾಸಸೌಧದಲ್ಲಿ ಗುರುವಾರ ವೀಡಿಯೋ ಸಂವಾದ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಪಕ್ಷಗಳಿಗೂ ನಿಯಮಗಳನ್ನು ಬದಲಾಯಿಸಲು ಹಕ್ಕಿಲ್ಲ ಎಂದು ಆರೋಗ್ಯ ಸಚಿವನಾಗಿ ನಾನು ಹೇಳುತ್ತಿದ್ದೇನೆ ಎಂದು ಹೇಳಿದರು.
ಈಗಾಗಲೇ ಚುನಾವಣ ಆಯುಕ್ತರಿಗೂ ಮನವಿ ಮಾಡಲಾಗಿದ್ದು, ಅವರು ಕೆಲವು ಮಾರ್ಗಸೂಚಿಗಳನ್ನು ನೀಡಿದ್ದಾರೆ. ಆದರೆ ಉಪಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಆ ಮಾರ್ಗಸೂಚಿಗಳು ಶೇ.100ರಷ್ಟು ಪಾಲನೆಯಾಗುತ್ತಿಲ್ಲ ಎಂಬುದನ್ನು ನಾನು ಗಮನಿಸಿದ್ದೇನೆ. ನಮಗಿರುವ ಇತಿಮಿತಿಯಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಮದುವೆ, ಜಾತ್ರೆ, ಧಾರ್ಮಿಕ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಲು ಅವಕಾಶವಿಲ್ಲ. ಸರಕಾರದ ಮಾರ್ಗಸೂಚಿಗಳನ್ನು ಪಾಲಿಸದಿದ್ದರೆ ಅಧಿಕಾರಿಗಳು ಕಠಿನ ಕ್ರಮ ಜರಗಿಸಲಿದ್ದಾರೆ. ಜನರು ಸಹಕರಿಸದಿದ್ದರೆ ಖಂಡಿತವಾಗಿಯೂ ಪರಿಸ್ಥಿತಿ ಕೈಮೀರಿ ಹೋಗಲಿದೆ. ಕರ್ನಾಟಕದಲ್ಲಿ ಅಂತಹ ಸ್ಥಿತಿ ತಲುಪುವುದು ಬೇಡ ಎಂದು ಮನವಿ ಮಾಡಿದರು.