ಅಂಬಿ ಅಂತಿಮ ದರ್ಶನಕ್ಕೆ ರಮ್ಯಾ ಬರದಿರಲು ಅನಾರೋಗ್ಯ ಕಾರಣ?
Team Udayavani, Nov 27, 2018, 9:40 AM IST
ಬೆಂಗಳೂರು: ರಾಜಕೀಯ ಭವಿಷ್ಯ,ಸಿನಿ ರಂಗದಲ್ಲಿ ಬಹಳಷ್ಟು ಸಹಕಾರ ನೀಡಿದ ನೆಚ್ಚಿನ ಅಂಬರೀಷ್ ಅಂಕಲ್ ಅವರ ಅಂತಿಮ ದರ್ಶನಕ್ಕೆ ಮಂಡ್ಯದ ಮಾಜಿ ಸಂಸದೆ, ನಟಿ ರಮ್ಯಾ ಆಗಮಿಸದೇ ಇದ್ದುದು ಹಲವು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಅನಾರೋಗ್ಯದ ಕಾರಣದಿಂದ ರಮ್ಯಾ ಅವರು ಆಗಮಿಸಿಲ್ಲ ಎಂದು ಅಂದಾಜಿಸಲಾಗಿದೆ.
ರಮ್ಯಾ ಅವರು ಅಕ್ಟೋಬರ್ 19 ರಂದು ಇನ್ಸ್ಟಾಗ್ರಾಂ ನಲ್ಲಿ ಕಾಲಿನ ಪಾದಕ್ಕೆ ಚಿಕಿತ್ಸೆ ಪಡೆದ ಚಿತ್ರವೊಂದನ್ನು ಪೋಸ್ಟ್ ಮಾಡಿ ಅನಾರೋಗ್ಯಕ್ಕೀಡಾದ ಬಗ್ಗೆ ಹೇಳಿಕೊಂಡಿದ್ದರು. ಮೂಳೆಗಳಿಗೆ ಸಂಬಂಧಿಸಿದ ಆಸ್ಟಿಯೋಕ್ಲ್ಯಾಟೋಮಾ ಎಂಬ ಕಾಯಿಲೆಯಿಂದ ನಾನು ಬಳಲುತ್ತಿದ್ದು, ಕೊಂಚ ತಡ ಮಾಡಿದರೆ ಕ್ಯಾನ್ಸರ್ಗೆ ಗುರಿಯಾಗಬೇಕಿತ್ತು ಎಂದು ಹೇಳಿಕೊಂಡಿದ್ದರು.
ಈ ಕಾಯಿಲೆ 10 ಲಕ್ಷ ಮಹಿಳೆಯರಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುತ್ತದೆ. ನಿರ್ಲಕ್ಷ್ಯ ವಹಿಸಬೇಡಿ. ಆರೋಗ್ಯದಲ್ಲಿ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ ಎಂದು ಸಲಹೆ ನೀಡಿದ್ದರು.
ಅಂಬರೀಶ್ ಅವರ ನಿಧನದ ಬಳಿಕ ಟ್ವೀಟ್ ಮಾಡಿದ್ದ ರಮ್ಯಾ, ‘ಅಂಬರೀಷ್ ಅಂಕಲ್ ಅವರು ಹೊರಟು ಹೋದ ಬಗ್ಗೆ ಕೇಳಿ ತುಂಬಾ ದುಃಖಿತಳಾಗಿದ್ದೇನೆ. ಅವರ ಆತ್ಮಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ನನ್ನ ತೀವ್ರ ಸಂತಾಪ. ಅವರನ್ನು ಯಾವಾಗಲೂ ಪ್ರೀತಿಯಿಂದ ನೆನಪಿಟ್ಟುಕೊಳ್ಳುತ್ತೇನೆ’. ಎಂದು ಬರೆದಿದ್ದರು.
ಮಂಡ್ಯದಲ್ಲಿ 2013ರಲ್ಲಿ ನಡೆದ ಲೋಕಸಭಾ ಉಪ ಚುನಾವಣೆಗೆ ರಮ್ಯಾ ಕಾಂಗ್ರೆಸ್ ಅಭ್ಯರ್ಥಿ ಯಾಗಲು ಅಂಬರೀಷ್ ಅವರೇ ಕಾರಣ. ಅಲ್ಲದೆ, ರಮ್ಯಾ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.
ರಾಕ್ಷಸ ಗುಣ ; ಜಗ್ಗೇಶ್ ಟಾಂಗ್
ರಮ್ಯಾ ಬಾರದೇ ಇದ್ದುದಕ್ಕೆ ನವರಸ ನಾಯಕ ಜಗ್ಗೇಶ್ ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.
ಸಾವಿನಲ್ಲಿ ಗೌರವಿಸದವರು ಮನುರೂಪದ ರಾಕ್ಷಸ ಗುಣದವರು..! ಕ್ರೂರತ್ವದ ಮಗ್ಗಲು ಪ್ರಕಟಿಸಿದ ಮಹನೀಯರು! ದೇವನೊಬ್ಬ ಇರುವ ಅವ ಎಲ್ಲ
ನೋಡುತಿರುವ! ದೋಸೆ ಮೊಗಚಿ ತಳ ಸೀಯುತ್ತದೆ ತಪ್ಪದೆ ಒಂದು ದಿನ! ಯತಃಮನಃತಥಃಜೀವನ! ಎಂದು ಬರೆದಿದ್ದಾರೆ.