ಕೈಮಗ್ಗ ಉತ್ಪನ್ನಗಳನ್ನು ಪ್ರೋತ್ಸಾಹಿಸಿ: ಸಚಿವ ಮುನೇನಕೊಪ್ಪ
Team Udayavani, Aug 7, 2022, 4:08 PM IST
ಬೆಂಗಳೂರು: ಕೈಮಗ್ಗ ಕ್ಷೇತ್ರದ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದು, ಕೈಮಗ್ಗ ಉತ್ಪನ್ನಗಳನ್ನು ಗ್ರಾಹಕರುಗಳು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಮಾಡಿ ಬಳಸುವ ಮೂಲಕ ಕೈಮಗ್ಗ ನೇಕಾರರನ್ನು ಪ್ರೋತ್ಸಾಹಿಸಬೇಕು ಎಂದು ಕೈಮಗ್ಗ ಮತ್ತು ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದರು.
8ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಪ್ರಯುಕ್ತ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಬೆಂಗಳೂರಿನ ಕುಮಾರ ಕೃಪಾ ರಸ್ತೆಯ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಏರ್ಪಡಿಸಲಾದ ಕೈಮಗ್ಗ ನೇಕಾರರ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ 2022ನೇ ಸಾಲಿನ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಕೃಷಿ ಕ್ಷೇತ್ರದಂತೆ ಕೈಮಗ್ಗ ಕ್ಷೇತ್ರದಲ್ಲೂ ಜಾರಿಗೊಳಿಸಿರುವ ಹಲವಾರು ಯೋಜನೆಗಳು ನೇಕಾರರಿಗೆ ನೆರವಾಗಿದೆ. ರಾಜ್ಯದ ಕೈಮಗ್ಗ ಉತ್ಪನ್ನಗಳು ಗುಣಮಟ್ಟ ಹಾಗೂ ಉತ್ಕೃಷ್ಟತೆ ಹೊಂದಿದ್ದು ಖರೀದಿ ಮಾಡುವ ಮೂಲಕ ನೇಕಾರರನ್ನು ಉತ್ತೇಜಿಸಿ ಬೆಂಬಲಿಸಬೇಕು ಎಂದು ಹೇಳಿದರು.
ಇದನ್ನೂ ಓದಿ:ಮಗುವನ್ನೇ ಬಾಲ್ಕನಿಯಿಂದ ಎಸೆದು ಕೊಲೆಗೈದ ತಾಯಿ: ಕಂದಮ್ಮನನ್ನು ಕಳೆದುಕೊಂಡು ಕಣ್ಣೀರಿಟ್ಟ ತಂದೆ
ಕಾರ್ಯಕ್ರಮದಲ್ಲಿ ಸಚಿವರು ಐದು ಕೈಮಗ್ಗ ನೇಕಾರರಿಗೆ ಪ್ರಶಸ್ತಿಯನ್ನು ಹಾಗೂ ಮೂವರು ಕೈಮಗ್ಗ ನೇಕಾರರಿಗೆ ಪ್ರಶಂಸೆ ಪತ್ರವನ್ನು ನೀಡಿ ಸನ್ಮಾನಿಸಿದರು.
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಸಿದ್ದು ಸವದಿ, ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗುತ್ತಿಗನೂರು ವಿರುಪಾಕ್ಷಗೌಡ ಸೇರಿದಂತೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ವಿವಿಧ ಜಿಲ್ಲೆಗಳ ನೇಕಾರರು ಉಪಸ್ಥಿತರಿದ್ದರು.
2022ನೇ ಸಾಲಿನ ರಾಜ್ಯ ಮಟ್ಟದ ನೇಕಾರರ ಪ್ರಶಸ್ತಿ ಪಡೆದ 5 ಕೈಮಗ್ಗ ನೇಕಾರರ ವಿವರ:
ರೇಷ್ಮೆ ಕೈಮಗ್ಗ ಕ್ಷೇತ್ರ
ಪ್ರಥಮ ಬಹುಮಾನ: ಮೊಳಕಾಲ್ಮೂರಿನ ಡಿ.ಎಸ್.ಮಲ್ಲಿಕಾರ್ಜುನ(ರೇಷ್ಮೆ ಸೀರೆಯಲ್ಲಿ ರೈತರ ಸುಗ್ಗಿ ಚಿತ್ರಣ)
ದ್ವಿತೀಯ ಬಹುಮಾನ: ಕೋಳ್ಳೆಗಾಲದ ಪಿ.ಶ್ರೀನಿವಾಸ್(ರೇಷ್ಮೆ ವಸ್ತ್ರದಲ್ಲಿ ಡಾ.ಪುನೀತ್ ರಾಜ್ಕುಮಾರ್ರವರ ಭಾವಚಿತ್ರ)
ಹತ್ತಿ ಕೈಮಗ್ಗ ಕ್ಷೇತ್ರ
ಪ್ರಥಮ ಬಹುಮಾನ: ಚಿಕ್ಕೋಡಿಯ ಸಚೀನ ಬಾಹುಸಾಬ ತೇರದಾಳೆ(ಕಾಟನ್ ಸೀರೆಯಲ್ಲಿ ಭಾರತದ ನಕ್ಷೆ)
ದ್ವಿತೀಯ ಬಹುಮಾನ: ಬೀಳಗಿಯ ಪಡಿಯಪ್ಪ ಗೋಕಾವಿ(ಕೊಂಡಿ ತಂತ್ರಜ್ಞಾನದೊಂದಿಗೆ ಇಳಕಲ್ ಮಾದರಿಯ ಸೀರೆ)
ಉಣ್ಣೆ ಕೈಮಗ್ಗ ಕ್ಷೇತ್ರ
ಪ್ರಥಮ ಬಹುಮಾನ: ಚಿಕ್ಕೋಡಿಯ ಶಂಕರ ಸಣ್ಣಕ್ಕಿ (ಉಣ್ಣೆ ನಿಶಾಣಿ-ಧ್ವಜ)