ಎಸ್ಟಿ ಸಚಿವಾಲಯ ಸ್ಥಾಪನೆ: ಸಂಪುಟ ಸಭೆ ತೀರ್ಮಾನ
Team Udayavani, Aug 5, 2021, 6:40 AM IST
ಬೆಂಗಳೂರು: ಮಹಿಳಾ ರಕ್ಷಣೆ ಮತ್ತು ಸಬಲೀಕರಣ ಯೋಜನೆಗಳ ಅನುಷ್ಠಾನಕ್ಕೆ ಮುಖ್ಯಮಂತ್ರಿ ಮೇಲ್ವಿಚಾರಣೆಯಲ್ಲಿ ಸಮಿತಿ ರಚಿಸಲು ಹಾಗೂ ಎಸ್ಟಿಪಿ ಯೋಜನೆಗಳ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ಸಚಿವ ಸಂಪುಟ ನಿರ್ಧರಿಸಿದೆ.
ಸಂಪುಟ ರಚನೆ ಬಳಿಕ ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದಲ್ಲಿ ಜರಗಿದ ಮೊದಲ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದ್ದು, ಖಾತೆಗಳ ಹಂಚಿಕೆ ಬಳಿಕ ಹೊಸದಾಗಿ ಕೊರೊನಾ ಟಾಸ್ಕ್ಫೋರ್ಸ್ ಪುನಾರಚನೆಗೂ ನಿರ್ಧರಿಸಲಾಗಿದೆ.
ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಯವರು, ಪರಿಶಿಷ್ಟ ಪಂಗಡ ಸಮುದಾಯವು ಬಹಳ ದಿನಗಳಿಂದ ಸರಕಾರದ ಎಸ್ಟಿಪಿ ಯೋಜನೆಗಳ ಜಾರಿಗೆ ಪ್ರತ್ಯೇಕ ಸಚಿವಾಲಯದ ಬೇಡಿಕೆ ಇಟ್ಟಿತ್ತು. ಆ ಬಗ್ಗೆ ಇಂದು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಬಿ.ಎಸ್. ಯಡಿಯೂರಪ್ಪ ಮಂಡಿಸಿರುವ ಬಜೆಟ್ನಲ್ಲಿ ಮಹಿಳಾ ಮತ್ತು ಮಕ್ಕಳ ಸಬಲೀಕರಣಕ್ಕೆ ಬೇರೆ ಬೇರೆ ಇಲಾಖೆ ಕಾರ್ಯಕ್ರಮಗಳಡಿ ಅನುದಾನ ಇಟ್ಟಿದ್ದು ಸಮನ್ವಯ ಆಗುತ್ತಿಲ್ಲ. ಹೀಗಾಗಿ, ಎಸ್ಸಿಪಿ ಟಿಎಸ್ಪಿ ಆನುದಾನ ಅನುಷ್ಠಾನಕ್ಕೆ ಇರುವಂತೆ ಮಹಿಳಾ ಮತ್ತು ಮಕ್ಕಳ ಸಬಲೀಕರಣ ಯೋಜನೆಗಳ ಅನುಷ್ಠಾನ ಮತ್ತು ಮೇಲುಸ್ತುವಾರಿಗೆ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಒಂದು ಸಮಿತಿ ಮಾಡಲು ತೀರ್ಮಾ ನಿಸಲಾಗಿದೆ ಎಂದು ತಿಳಿಸಿದರು.
ಎರಡು ದಿನಗಳಲ್ಲಿ ಖಾತೆ ಹಂಚಿಕೆ:
ಸಚಿವರಿಗೆ ಒಂದೆರಡು ದಿನಗಳಲ್ಲಿ ನಾನೇ ಖಾತೆ ಹಂಚಿಕೆ ಮಾಡಲಿದ್ದೇನೆ ಎಂದು ಹೇಳಿದರು. ಯಾವುದೇ ಸಚಿವರು ಇಂಥದ್ದೇ ಖಾತೆ ಬೇಕು ಎಂದು ಕೇಳಿಲ್ಲ. ಶಶಿಕಲಾ ಜೊಲ್ಲೆ ಮೇಲಿನ ಆರೋಪಕ್ಕೆ ಹಲವಾರು ಆಯಾಮಗಳಿವೆ. ಅವರಿಂದಲೂ ವಿವರಣೆ ಕೇಳಿದ್ದೇನೆ. ಗುರುತರ ಆರೋಪ ಇಲ್ಲ ಎಂದ ಸಮರ್ಥನೆ ನೀಡಿದರು.
ಎಲ್ಲ ಶಾಸಕರೂ ಮಂತ್ರಿಯಾಗಲು ಸಾಧ್ಯವಿಲ್ಲ. ಕೆಲವರನ್ನು ಕೈ ಬಿಡ ಲಾಗಿದೆ, ಹೊಸಬರನ್ನು ತೆಗೆದು ಕೊಳ್ಳಲಾಗಿದೆ. ಅತೃಪ್ತರ ಜತೆ ಮಾತನಾಡುತ್ತೇವೆ. ಮುಂದೆ ಅವಕಾಶ ಬಂದಾಗ ಕೊಡುತ್ತೇವೆ. ಕೆಲವರು ಹಿರಿಯರು, ಸಂಘಟನೆ ಅನುಭವ ಇದ್ದವರನ್ನು ಪಕ್ಷದ ಸಂಘಟನೆಗೆ ಬಳಕೆ ಮಾಡಿಕೊಳ್ಳಲಾಗುವುದು ಎಂದು ವರಿಷ್ಠರು ಹೇಳಿದ್ದಾರೆ ಎಂದರು.
ಸೂಚನೆ : ನಾಳೆಯಿಂದಲೇ ಸಚಿವರು ಕೊರೊನಾ ಮೂರನೇ ಅಲೆ ತಡೆಗಟ್ಟುವುದು ಹಾಗೂ ಪ್ರವಾಹ ಪರಿಸ್ಥಿತಿ ಪರಿಶೀಲನೆಗೆ ತೆರಳುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಪ್ರಗತಿ ಪರಿಶೀಲನೆ ನಡೆಸಿ ಸ್ಥಳೀಯವಾಗಿ ಲಭ್ಯ ಇರುವ ಅನುದಾನದಲ್ಲಿ ಪರಿಹಾರ ಕೊಡಿ ಹೆಚ್ಚುವರಿಯಾಗಿ ಬೇಕಾದರೆ ಪ್ರಸ್ತಾವನೆ ಸಲ್ಲಿಸಿ ಎಂದು ನಿರ್ದೇಶನ ಮಾಡಿದ್ದಾರೆ.