ಸಮುದಾಯ ಕೈ ಜೋಡಿಸಿದರೆ ಎಲ್ಲವೂ ಸಾಧ್ಯ
Team Udayavani, Nov 2, 2020, 6:15 AM IST
ಸಾಂದರ್ಭಿಕ ಚಿತ್ರ
ರಾಜ್ಯದಲ್ಲಿ ಸರಕಾರಿ ಶಾಲೆಗಳ ಅಭಿವೃದ್ಧಿ ನಿಟ್ಟಿನಲ್ಲಿ ಉದಯವಾಣಿ ಆರಂಭಿಸಿರುವ “ಸಿರಿಗನ್ನಡಂ ಶಾಲೆಗೆ’ ಅಭಿಯಾನದ ಭಾಗವಾಗಿ ರಾಜ್ಯ ಸರಕಾರದ ಶಿಕ್ಷಣ ಸಲಹೆಗಾರ ಪ್ರೊ| ಎಂ.ಆರ್.ದೊರೆಸ್ವಾಮಿ ಇಲ್ಲಿ ಕೆಲವು ಸಲಹೆಗಳನ್ನು ನೀಡಿದ್ದಾರೆ.
ಬೆಂಗಳೂರು: ಪ್ರತಿಯೊಂದು ಸರಕಾರಿ ಶಾಲೆಯೂ ಮಾದರಿ ಶಾಲೆಯಾಗಬೇಕು. ಸರಕಾರಿ ಶಾಲೆಯ ಗುಣಮಟ್ಟ ಸುಧಾರಣೆ ಜತೆಗೆ ಭೌತಿಕ ಸೌಲಭ್ಯವೂ ಸುಧಾರಿಸಬೇಕು. ಸರಕಾರದ ಕಾರ್ಯಸಾಧನೆಯ ಜತೆಗೆ ಸಮುದಾಯದ ಸಹಭಾಗಿತ್ವ ಇದ್ದಾಗ ಮಾತ್ರ ಕನ್ನಡ ಶಾಲೆಯ ಸಮಗ್ರ ಅಭಿವೃದ್ಧಿ ಸಾಧ್ಯ. ಸರಕಾರಿ ಶಾಲೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳ ಪಾತ್ರ ಹಿರಿದು.
ಇವು ಸರಕಾರದ ಶಿಕ್ಷಣ ಸಲಹೆಗಾರ ಪ್ರೊ| ಎಂ.ಆರ್.ದೊರೆಸ್ವಾಮಿ ಅವರ ಅಭಿಪ್ರಾಯಗಳು. ಉದಯವಾಣಿ ಜತೆ ಮಾತನಾಡಿದ ಅವರು, ಸರಕಾರಿ ಕನ್ನಡ ಶಾಲೆಯಲ್ಲಿ ವ್ಯಾಸಂಗ ಮಾಡುವ ಎಲ್ಲ ಮಕ್ಕಳಿಗೂ ಖಾಸಗಿ ಶಾಲೆಯಲ್ಲಿ ಸಿಗುವಷ್ಟೇ ಗುಣಮಟ್ಟದ ಶಿಕ್ಷಣ ಒದಗಿಸಬೇಕು. ಸರಕಾರಿ ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿ ಜತೆಗೆ ಶಿಕ್ಷಕರಿಗೆ ಗುಣಮಟ್ಟದ ತರಬೇತಿ ನೀಡುವುದು ಮತ್ತು ಅದರ ಉಪಯೋಗ ಮಕ್ಕಳಿಗೆ ಆಗುವಂತೆ ನೋಡಿಕೊಳ್ಳುವುದು ಅತಿ ಮುಖ್ಯ. ಈ ನಿಟ್ಟಿನಲ್ಲಿ ಸರಕಾರದ ಕಾರ್ಯಸಾಧನೆಯ ಜತೆಗೆ ಸಮುದಾಯದ ಸಹಭಾಗಿತ್ವವೂ ಮುಖ್ಯವಾಗಿದೆ ಎಂದರು.
ಈಗಾಗಲೇ, ರಾಜ್ಯದ ಎಲ್ಲ ಶಾಸಕರು ತಮ್ಮ ಕ್ಷೇತ್ರ ವ್ಯಾಪ್ತಿಯ ಮೂರು ಸರಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಗೊಳಿಸುವ ಕಾರ್ಯ ಚಾಲನೆಯಲ್ಲಿದೆ. ಸಂಸದರಿಗೆ, ರಾಜ್ಯಸಭಾ ಸದಸ್ಯರಿಗೆ ತಲಾ 5 ಶಾಲೆ, ಸಚಿವರಿಗೆ ತಲಾ ಐದು ಶಾಲೆ, ಮುಖ್ಯಮಂತ್ರಿಗಳು ಸರಕಾರಿ ಶಾಲೆಯನ್ನು ದತ್ತು ಪಡೆದಿದ್ದಾರೆ. ರಾಜ್ಯದ 50 ವಿಶ್ವವಿದ್ಯಾಲಯಗಳಲ್ಲಿ ಸುಮಾರು 30 ವಿಶ್ವವಿದ್ಯಾಲಯಗಳು ಈಗಾಗಲೇ ತಲಾ 10 ಶಾಲೆಗಳನ್ನು ದತ್ತು ಪಡೆಯಲು ಒಪ್ಪಿಕೊಂಡಿವೆ. ನಟ ಸುದೀಪ್ 5 ಶಾಲೆಯನ್ನು ದತ್ತು ಪಡೆದಿದ್ದಾರೆ. ವಿವಿಧ ಸಂಘ ಸಂಸ್ಥೆಗಳು ಸರಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಗೊಳಿಸುವ ಆಶಯ ವ್ಯಕ್ತಪಡಿಸಿವೆ. ಜನಪ್ರತಿನಿಧಿಗಳು, ವಿಶ್ವವಿದ್ಯಾಲಯಗಳು ಸೇರಿ ಒಟ್ಟಾರೆಯಾಗಿ ಈಗಾಗಲೇ 1,462 ಸರಕಾರಿ ಶಾಲೆಗಳನ್ನು ದತ್ತು ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.
ಈಗಾಗಲೇ 200 ಕಾರ್ಪೊರೇಟ್ ಸಂಸ್ಥೆಗಳಿಗೆ ಪತ್ರ ಬರೆಯಲಾಗಿದ್ದು, ಪ್ರತಿಯೊಂದು ಸಂಸ್ಥೆಯು 100 ಸರಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಬೇಕು ಎಂದು ಕೋರಿದ್ದೇವೆ. ವಿಪ್ರೋ, ಇನ್ಫೋಸಿಸ್, ಬಾಷ್, ಬಯೋಕಾನ್ ಮೊದಲಾದ ಸಂಸ್ಥೆಗಳು ಈಗಾಗಲೇ ಈ ಕಾರ್ಯ ವನ್ನು ಮಾಡುತ್ತಿವೆ ಎಂದರು.
ಸಮುದಾಯದ ಪಾಲುದಾರಿಕೆ ಹಿನ್ನೆಲೆಯಲ್ಲಿ ದತ್ತು ಪಡೆದ ಶಾಲೆಗಳಲ್ಲಿ ಪ್ರತ್ಯೇಕ ಸಮಿತಿಯೊಂದನ್ನು ರಚನೆ ಮಾಡಲಾಗುತ್ತದೆ. ಗ್ರಾ.ಪಂ. ಸದಸ್ಯರು, ಊರಿನ ಪ್ರಮುಖರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಮಿತಿ ಯಲ್ಲಿರುತ್ತಾರೆ. ತಿಂಗಳಿಗೊಮ್ಮೆ ಸಭೆ ಸೇರಿ, ಶಾಲೆಯ ಶೈಕ್ಷಣಿಕ ಹಾಗೂ ಮೂಲಸೌಕರ್ಯದ ಪ್ರಗತಿ, ಮಕ್ಕಳ ಹಾಜರಾತಿ, ಕಿರುಪರೀಕ್ಷೆಯ ಸಾಧನೆಯ ಮಾಹಿತಿ ಕಲೆ ಹಾಕಿ, ಸರಕಾರಕ್ಕೆ ಸಲ್ಲಿಸುವ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಶಿಕ್ಷಕರಿಗೆ ತರಬೇತಿ
ದತ್ತು ಪಡೆದ ಶಾಲೆಯ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಿ, ಮಕ್ಕಳಿಗೆ ಅದರಿಂದ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅಜೀಂ ಪ್ರೇಮ್ಜೀ ಸಂಸ್ಥೆ ಜತೆ ಸೇರಿ ತರಬೇತಿ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲೇ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ವಿವಿಗಳ ಪಾತ್ರ ಹಿರಿದಾಗಿದ್ದು, ಸಂಶೋಧನೆ ನಡೆಸುತ್ತಿರುವ ವಿವಿಧ ವಿಭಾಗಗಳ ಅಭ್ಯರ್ಥಿಗಳು ತಿಂಗಳಿಗೆ ನಾಲ್ಕೈದು ದಿನ ಸರಕಾರಿ ಶಾಲೆಗಳಿಗೆ ಭೇಟಿ ನೀಡಿ, ಬೋಧನೆ ಮಾಡುವ ವ್ಯವಸ್ಥೆ ಆಗಬೇಕು ಎಂದು ದೊರೆಸ್ವಾಮಿ ಅವರು ಸಲಹೆ ನೀಡಿದರು.
ಮಾಡಲೇಬೇಕಾದ ಕಾರ್ಯ
ದತ್ತು ಪಡೆದ ಪ್ರತಿಯೊಂದು ಶಾಲೆಗೂ ಶುದ್ಧ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕು.
ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣ ಮಾಡಬೇಕು.
ಶಾಲಾವರಣದ ಸುತ್ತ ಕಾಂಪೌಂಡ್ ನಿರ್ಮಿಸಬೇಕು.
ಶಾಲಾ ಕಟ್ಟಡ ಅಥವಾ ಕೊಠಡಿ ದುರಸ್ತಿಗೆ ಆದ್ಯತೆ ನೀಡಬೇಕು.
ಪ್ರೌಢಶಾಲೆಯಲ್ಲಿ ಪ್ರತ್ಯೇಕ ಕಂಪ್ಯೂಟರ್ ಹಾಗೂ ವಿಜ್ಞಾನ ಲ್ಯಾಬ್ ನಿರ್ಮಾಣ.
ರಾಜು ಖಾರ್ವಿ ಕೊಡೇರಿ