ಸಾಕ್ಷಿ ನಾಶ ?ಪರಪ್ಪನ ಅಗ್ರಹಾರದಿಂದ ರಾತ್ರೋರಾತ್ರಿ ಕೈದಿಗಳ ಶಿಫ್ಟ್
Team Udayavani, Jul 16, 2017, 10:27 AM IST
ಬೆಂಗಳೂರು : ಕಾರಾಗೃಹ ದಲ್ಲಿನ ಹಲವು ಅಕ್ರಮಗಳ ವಿಚಾರದಲ್ಲಿ ಸರಕಾರ ತನಿಖೆಗೆ ಆದೇಶಿಸಿದ ಬೆನ್ನಲ್ಲೇ ಶನಿವಾರ ರಾತ್ರೋ ರಾತ್ರಿ 18 ಕೈದಿಗಳನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಿದ ಬಗ್ಗೆ ವರದಿಯಾಗಿದೆ.
ಜೈಲು ಸೂಪರಿಟೆಂಡೆಂಟ್ ಆಗಿರುವ ಕೃಷ್ಣ ಕುಮಾರ್ ವಿರುದ್ಧ ಆರೋಪ ಮಾಡಿರುವ ಕೈದಿಗಳನ್ನು ಬಳ್ಳಾರಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ. ಡಿಐಜಿ ರೂಪಾ ಅವರು ಶನಿವಾರ ಜೈಲಿಗೆ ಭೇಟಿ ನೀಡಿದ್ದಾಗ ಈ ಕೈದಿಗಳು ದೂರು ನೀಡಿದ್ದರು ಎಂದು ತಿಳಿದು ಬಂದಿದ್ದು, ಕೆಲ ಹೊತ್ತಿನ ಬಳಿಕ ಕೈದಿಗಳ ನಡುವೆ ಘರ್ಷಣೆ ನಡೆದಿತ್ತು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಶಶಿಕಲಾಗೆ ಐಷಾರಾಮಿ ವ್ಯವಸ್ಥೆ ಒದಗಿಸಿಕೊಡಲು 2 ಕೋಟಿ ರೂಪಾಯಿ ಲಂಚ ಪಡೆದಿರುವ ಬಗ್ಗೆ ಡಿಐಜಿ ರೂಪಾ ಅವರು ವರದಿ ನೀಡಿದ್ದರು. ಆ ಬಳಿಕ ಜೈಲಿನಲ್ಲಿನ ಹಲವು ಅಕ್ರಮಗಳು ಬೆಳಕಿಗೆ ಬಂದಿದ್ದವು.
ಸಿದ್ದರಾಮಯ್ಯ ಕಿಡಿ
ಮೈಸೂರಿನಲ್ಲಿ ಭಾನುವಾರ ಸುದ್ದಿಗಾರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಐಜಿ ರೂಪಾ ಅವರು ನೀಡಿರುವ ವರದಿಯಲ್ಲಿ ತಪ್ಪು ಮಾಡಿರುವುದು ಕಂಡು ಬಂದಲ್ಲಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ನಿಯ ಮೀರಿ ಅಶಿಸ್ತು ಪ್ರದರ್ಶಿಸುವ ಅಧಿಕಾರಿಗಳ ವಿರುದ್ಧವೂ ಕ್ರಮಕೈಗೊಳ್ಳುತ್ತೇವೆ ಎಂದರು.