ನಕಲಿ ಬಿಲ್ ಪಾವತಿ ಪತ್ತೆ: ಸಚಿವ ಗೋವಿಂದ ಕಾರಜೋಳ
Team Udayavani, Jan 5, 2022, 5:20 AM IST
ಬೆಂಗಳೂರು: ನೀರಾವರಿ ನಿಗಮದ ಅಥಣಿ ವಿಭಾಗದಲ್ಲಿ 28 ಕೋಟಿ ರೂ. ಮೊತ್ತದ ನಕಲಿ ಬಿಲ್ ಪಾವತಿ ಮಾಡಿರುವುದು ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿ 20 ಅಧಿಕಾರಿಗಳನ್ನು ಅಮಾನತಿನಲ್ಲಿಡುವುದರ ಜತೆಗೆ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ಮಂಗಳವಾರ ಕರ್ನಾಟಕ ನೀರಾವರಿ ನಿಗಮದ ಯೋಜನಾ ವಾರು ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಎಲ್ಲ ಅಧಿಕಾರಿಗಳ ಆಸ್ತಿ ಪರಭಾರೆ ಆಗದಂತೆ ನಿಯಮಾನುಸಾರ ಋಣಭಾರ ಸೃಷ್ಟಿಸಲು ಜಿಲ್ಲಾಧಿಕಾರಿಗಳನ್ನು ಮತ್ತು ಉಪ ನೋಂದ ಣಾಧಿಕಾರಿಗಳನ್ನು ಕೋರಲಾಗಿದೆ. ಇಂತಹ ಪ್ರಕರಣಗಳನ್ನು ಜಾಗೃತ ದಳದ ತನಿಖೆಗೆ ಒಪ್ಪಿಸಲಾಗಿದೆ. ಬೇರೆ ಯಾವುದಾದರೂ ಪ್ರಕರಣ ಗಳು ಗಮನಕ್ಕೆ ಬಂದರೆ, ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರಗಿಸ ಲಾಗುವುದು ಎಂದೂ ಹೇಳಿದರು.
ಇದನ್ನೂ ಓದಿ:ಮಸ್ಕ್ ಕಂಪನಿಯಿಂದ ಗ್ರಾಹಕರಿಗೆ ಮೊತ್ತ ವಾಪಸ್ !
ಪ್ರಸಕ್ತ ವರ್ಷ 45,337 ಹೆಕ್ಟೇರ್ ನೀರಾವರಿ
ರಾಜ್ಯಾದ್ಯಂತ 18 ಸಾವಿರ ಕೋಟಿ ವೆಚ್ಚದ ನೀರಾವರಿ ಕಾಮಗಾರಿಗಳು ಕರ್ನಾಟಕ ನೀರಾವರಿ ನಿಗಮದಡಿ ನಡೆಯುತ್ತಿದ್ದು, ನಿಗಮದ ಒಟ್ಟಾರೆ ನೀರಾವರಿ ಸಾಮರ್ಥ್ಯದ ಗುರಿ 17,14,337 ಹೆಕ್ಟೇರ್ ಆಗಿದೆ. ಈ ಪೈಕಿ 2021ರ ನವೆಂಬರ್ ಅಂತ್ಯಕ್ಕೆ 14,66,251 ಹೆಕ್ಟೇರ್ ಅನ್ನು ನೀರಾವರಿ ವ್ಯಾಪ್ತಿಗೆ ತರಲಾಗಿದ್ದು, ಇನ್ನೂ 2,45,086 ಹೆಕ್ಟೇರ್ ಗುರಿ ಸಾಧಿಸಬೇಕಿದೆ. ಪ್ರಸಕ್ತ ಸಾಲಿನಲ್ಲಿ 45,337 ಹೆಕ್ಟೇರ್ ಜಮೀನನ್ನು ನೀರಾವರಿ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.