ಸಿಎಂ ಗ್ರಾಮ ವಾಸ್ತವ್ಯ ವೇಳೆ ರೈತರ ಘೇರಾವ್
Team Udayavani, Jun 19, 2019, 3:00 AM IST
ಬಾಗಲಕೋಟೆ: ರೈತರ ಸಾಲಮನ್ನಾ ಕುರಿತು ಶ್ವೇತಪತ್ರ ಹೊರಡಿಸುವುದು ಹಾಗೂ ಕಬ್ಬಿನ ಬಾಕಿ ಕೊಡಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜೂ.21ರಿಂದ ಆರಂಭಿಸಲಿರುವ ಗ್ರಾಮ ವಾಸ್ತವ್ಯದ ವೇಳೆ ರೈತರೊಂದಿಗೆ ಘೇರಾವ್ ಹಾಕಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಿರ್ಧರಿಸಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಕಾರ್ಯಾಧ್ಯಕ್ಷ ಕೆ.ಜಿ. ಶಾಂತಸ್ವಾಮಿಮಠ, ರೈತರ ಸಾಲಮನ್ನಾ ವಿಷಯದಲ್ಲಿ ಸಮ್ಮಿಶ್ರ ಸರ್ಕಾರ ಸುಳ್ಳು ಹೇಳುತ್ತಿದೆ. ಈವರೆಗೆ ಎಷ್ಟು ರೈತರ, ಎಷ್ಟು ಸಾಲ ಮನ್ನಾ ಮಾಡಲಾಗಿದೆ ಎಂಬುದರ ಕುರಿತು ಶ್ವೇತಪತ್ರ ಹೊರಡಿಸಬೇಕು.
ಅಲ್ಲದೆ, ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಿರುವ ಬಾಕಿ ಹಣವನ್ನು ತಕ್ಷಣ ಕೊಡಿಸಬೇಕು ಎಂಬುದು ಸೇರಿದಂತೆ ರೈತರ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಸಿಎಂ ಕುಮಾರಸ್ವಾಮಿ ಎಲ್ಲಿಯೇ ಗ್ರಾಮ ವಾಸ್ತವ್ಯ ಮಾಡಿದರೂ ಅಲ್ಲಿ ಘೇರಾವ್ ಹಾಕಲಾಗುವುದು. ಯಾದಗಿರಿ ಜಿಲ್ಲೆಯಿಂದ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಆರಂಭಿಸಲಿದ್ದು, ಈ ವೇಳೆ ಘೇರಾವ್ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದರು.