ವೈದ್ಯ ಶಿಕ್ಷಣ ಶುಶ್ರೂಷಕರಿಗೆ ಇನ್ನೂ ಕನಸಾಗಿ ಉಳಿದ ಭತ್ತೆ
Team Udayavani, Jan 29, 2022, 7:00 AM IST
ಬೆಂಗಳೂರು: ಕೊರೊನಾದ ಮೊದಲ ಮತ್ತು ಎರಡನೇ ಅಲೆಯ ಕಾಲದಲ್ಲಿ ಜೀವದ ಹಂಗು ತೊರೆದು ಜನರನ್ನು ರಕ್ಷಿಸಿರುವ ವೈದ್ಯಕೀಯ ಶಿಕ್ಷಣ ಇಲಾಖೆಯ ಖಾಯಂ ಶುಶ್ರೂಷಕರಿಗೆ ವಿಶೇಷ ಭತ್ತೆ ಇನ್ನೂ ಸಿಕ್ಕಿಲ್ಲ!
ಆರೋಗ್ಯ ಇಲಾಖೆಯ ನರ್ಸ್ಗಳಿಗೆ ವಿಶೇಷ ಭತ್ತೆ ನೀಡಲಾಗಿದ್ದರೂ ವೈದ್ಯಕೀಯ ಶಿಕ್ಷಣ ಇಲಾಖೆಯ ಶುಶ್ರೂಷಕರಿಗೆ ಮಾತ್ರ ಸಿಕ್ಕಿಲ್ಲ.
ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಬೋಧಕ ಸಿಬಂದಿ ಸಹಿತ ಒಟ್ಟು ಆರು ಸಾವಿರ ಸರಕಾರಿ ಹಾಗೂ ಸ್ವಾಯತ್ತ ಸಂಸ್ಥೆಗಳ ವೈದ್ಯಕೀಯ ಶಿಕ್ಷಣ ಇಲಾಖಾ ಶುಶ್ರೂಷಕರಿದ್ದಾರೆ. ಇವರಲ್ಲಿ 3,000 ಖಾಯಂ ಹಾಗೂ ಇತರರು ಗುತ್ತಿಗೆ ಶುಶ್ರೂಷಕರು.
ಕೆಲವು ಜಿಲ್ಲೆಗಳನ್ನು ಹೊರತು ಪಡಿಸಿ, ಆರೋಗ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾಯಂ ಶುಶ್ರೂಷಕರಿಗೆ ಮೊದಲ ಅಲೆಯ ಸಂದರ್ಭ ಮಾಸಿಕ 5,000 ರೂ.ನಂತೆ 6 ತಿಂಗಳು ಹಾಗೂ 2ನೇ ಅಲೆ ಸಂದರ್ಭ 8 ಸಾ. ರೂ.ನಂತೆ ವಿಶೇಷ ಭತ್ತೆ ನೀಡಲಾಗಿತ್ತು. ಅದನ್ನು ಈಗಲೂ ಮುಂದು ವರಿಸಲಾಗಿದೆ.
ಇದನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಅಡಿಯಲ್ಲಿ ಬರುವ ಶುಶ್ರೂಷಕರಿಗೂ ನೀಡುವಂತೆ ಸಚಿವರಿಗೆ ಮನವಿ ಮಾಡಲಾಗಿದ್ದರೂ ಸಿಕ್ಕಿದ್ದು ಆಶ್ವಾಸನೆ ಮಾತ್ರ ಎಂದು ಶುಶ್ರೂಷಕರ ಸಂಘದ ಅಧ್ಯಕ್ಷರು ಅವಲತ್ತುಕೊಳ್ಳುತ್ತಿದ್ದಾರೆ.
ನಮಗೂ ಕೊಡಿ ಭತ್ತೆ
ಆರೋಗ್ಯ ಇಲಾಖೆಯ ಖಾಯಂ ಶುಶ್ರೂಷಕರಿಗೆ ನೀಡಿದ ಕೊರೊನಾ ವಿಶೇಷ ಭತ್ತೆ ಮಂಜೂರಾತಿಯನ್ನು ವೈದ್ಯಕೀಯ ಶಿಕ್ಷಣ ಇಲಾಖಾ ಖಾಯಂ ಶುಶ್ರೂಷಕ ರಿಗೂ ನೀಡಬೇಕು. ಮೊದಲ ಅಲೆಯಿಂದಲೂ ಇಂದಿ ನವರೆಗೂ ಪ್ರಾಥಮಿಕ ಸೋಂಕಿತರಿಂದ ತೃತೀಯ ಸೋಂಕಿತರವರೆಗೂ ನಾವೂ ಸೇವೆ ಸಲ್ಲಿಸಿದ್ದೇವೆ ಎಂದು ರಾಜ್ಯ ಸರಕಾರಿ ವೈದ್ಯಕೀಯ ಶಿಕ್ಷಣ ಇಲಾಖಾ ಶುಶ್ರೂಷಾಧಿಕಾರಿಗಳ ಸಂಘದ ಅಧ್ಯಕ್ಷ ಬಿ.ಸಂತೋಷ್ ಕುಮಾರ್ ಅವರು ಹೇಳಿದ್ದಾರೆ.
ಇದನ್ನೂ ಓದಿ:“ರಾಷ್ಟ್ರವೇ ಮೊದಲು’ ಎಂಬ ಯುವಕರಿಂದಲೇ ದೇಶದ ಅಭಿವೃದ್ಧಿ
ಪ್ರಸ್ತಾವನೆ ಕಳುಹಿಸಲಾಗಿದೆ
ಕೊರೊನಾ ಸಂದರ್ಭ ಸೇವೆ ಸಲ್ಲಿಸಿದ ವೈದ್ಯಕೀಯ ಶಿಕ್ಷಣ ಇಲಾಖೆಯ ಖಾಯಂ ಶುಶ್ರೂಷಕರಿಗೆ ವಿಶೇಷ ಭತ್ತೆ ಕೊಡುವ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಲಾಗಿದ್ದು, ಹಣಕಾಸು ಇಲಾಖೆ ಒಪ್ಪಿಗೆ ಸಿಕ್ಕ ಕೂಡಲೇ ಭತ್ತೆ ನೀಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ| ಪಿ.ಜಿ. ಗಿರೀಶ್ ಹೇಳಿದ್ದಾರೆ.
ವೈದ್ಯಕೀಯ ಶಿಕ್ಷಣ ಇಲಾಖೆ ಶುಶ್ರೂಷಕರ ಕಾರ್ಯ
-ಪ್ರಾಥಮಿಕ ಸೋಂಕಿತರಿಂದ ಹಿಡಿದು ತೃತೀಯ ಸೋಂಕಿತರ ವರೆಗೆ ಚಿಕಿತ್ಸೆ
-ಐಸಿಯು ಘಟಕದಲ್ಲಿದ್ದ ಸೋಂಕಿತರಿಗೆ ಚಿಕಿತ್ಸೆ
-ಮನೆಗಳಿಗೆ ಭೇಟಿ ನೀಡಿ ಲಸಿಕಾ ಅಭಿಯಾನ
-ಕೊರೊನಾ ಸೋಂಕಿತರ ತುರ್ತು ಶಸ್ತ್ರಚಿಕಿತ್ಸೆ
– ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸುವುದು
-ಬ್ಲ್ಯಾಕ್ ಫಂಗಸ್ ಸೋಂಕಿತರಿಗೆ ಚಿಕಿತ್ಸೆ
ಆರೋಗ್ಯ ಇಲಾಖೆ ಶುಶ್ರೂಷಕರ ಕಾರ್ಯ
-ತಾಲೂಕು ಹಾಗೂ ಹೋಬಳಿ ಮಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೊರೊನಾ ಪರೀಕ್ಷೆ
-ಮನೆಗಳಿಗೆ ಭೇಟಿ ನೀಡಿ ಕೊರೊನಾ ಲಸಿಕಾ ಅಭಿಯಾನ
-ಕೊರೊನಾ ಸೋಂಕಿತರಿಗೆ ಪ್ರಾಥಮಿಕ ಚಿಕಿತ್ಸೆ
– ಕೊರೊನಾ ನಿಯಂತ್ರಿಸುವಲ್ಲಿ ಜಾಗೃತಿ
- ಭಾರತಿ ಸಜ್ಜನ್