ಕುಷ್ಟಗಿ ಮಾಜಿ ಶಾಸಕ ಹಸನಸಾಬ್ ದೋಟಿಹಾಳ ಕಾಂಗ್ರೆಸ್ ನಲ್ಲಿ ಇರ್ತಾರ? ಜೆಡಿಎಸ್ ಸೇರ್ತಾರ!
Team Udayavani, May 26, 2022, 10:30 AM IST
ಕುಷ್ಟಗಿ: ಮಹತ್ವದ ಬೆಳವಣಿಗೆಯಲ್ಲಿ ಕುಷ್ಟಗಿಯ ಮಾಜಿ ಶಾಸಕ, ಕೆಪಿಸಿಸಿ ಉಪಾಧ್ಯಕ್ಷರಾಗಿರುವ ಹಸನಸಾಬ್ ದೋಟಿಹಾಳ ಅವರು ಜೆಡಿಎಸ್ ಸೇರುವ ಇಂಗಿತ ವ್ಯಕ್ತಪಡಿಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು, ಕುಷ್ಟಗಿ ಮಾಜಿ ಶಾಸಕ ಹಸನಸಾಬ್ ದೋಟಿಹಾಳ ಅವರನ್ನು ಸಂಪರ್ಕಿಸಿ ಜೆಡಿಎಸ್ ಪಕ್ಷಕ್ಕೆ ಅಹ್ವಾನಿಸಿದ್ದಾರೆ. ಹೀಗಾಗಿ ಮಾಜಿ ಶಾಸಕ ಹಸನಸಾಬ್ ದೋಟಿಹಾಳ ಅವರು, ಕಾಂಗ್ರೆಸ್ ತೊರೆದು, ಜೆಡಿಎಸ್ ಸೇರುವ ಇಂಗಿತ ವ್ಯಕ್ತಪಡಿಸಿರುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ಹಾಸನ ಸಾಬ್ ದೋಟಿಹಾಳ ಅವರು, ಕ್ಷೇತ್ರದ ಕಾರ್ಯಕರ್ತರು, ಅಭಿಮಾನಿಗಳ ಅಭಿಪ್ರಾಯದ ಮೇರೆಗೆ ರಾಜಕೀಯ ಮುಂದಿನ ನಡೆ ತಿಳಿಸುವುದಾಗಿ ಸಿ.ಎಂ.ಇಬ್ರಾಹಿಂ ಅವರಿಗೆ ತಿಳಿಸಿರುವುದಾಗಿ ಹೇಳಿರುವ ಸುಳಿವಿನ ಹಿನ್ನೆಲೆಯಲ್ಲಿ ಹಸನಸಾಬ್ ದೋಟಿಹಾಳ ಕಾಂಗ್ರೆಸ್ ಗೆ ಕೈ ಕೊಡುವುದು ಪಕ್ಕಾ ಎನ್ನಲಾಗುತ್ತಿದೆ.
ಕಾಂಗ್ರೆಸ್ ನಲ್ಲಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಪ್ರಾಬಲ್ಯದಲ್ಲಿ ಕಾಂಗ್ರೆಸ್ ಪಕ್ಷದಿಂದ ತಮ್ಮನ್ನು ಗುರುತಿಸುವುದು ಕಷ್ಟಸಾದ್ಯ. ಹೀಗಾಗಿ ಜೆಡಿಎಸ್ ಮೂಲಕ ಕ್ಷೇತ್ರದ ಶಾಸಕರಾಗುವ ಪ್ರಯತ್ನ ಅವರದು ಎನ್ನಲಾಗುತ್ತಿದೆ. ಮೂಲತಃ ಜನತಾ ಪರಿವಾರದ ಹಸನಸಾಬ್ ದೋಟಿಹಾಳ ಅವರು ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷ ಸೇರಿ ಕುಷ್ಟಗಿ ಕ್ಷೇತ್ರದ ಶಾಸಕರಾಗಿದ್ದರು. ಕಾಂಗ್ರೆಸ್ ಹೈಕಮಾಂಡ್ ಮತ್ತೊಮ್ಮೆ ಕ್ಷೇತ್ರ ಪ್ರತಿನಿಧಿಸಲು ಟಿಕೆಟ್ ನೀಡದೆ ಲಿಂಗಸುಗೂರು ಕ್ಷೇತ್ರದಿಂದ ವಲಸೆ ಬಂದ ಅಮರೇಗೌಡ ಪಾಟೀಲ ಬಯ್ಯಾಪೂರ ಅವರಿಗೆ 2008ರಲ್ಲಿ ಟಿಕೇಟ್ ನೀಡಿರುವುದು ಅಸಮಧಾನ ಹಾಗೆಯೇ ಇದ್ದು, ಇದೀಗ ಸಿಎಂ ಇಬ್ರಾಹಿಂ ಅವರು ಜೆಡಿಎಸ್ ರಾಜ್ಯಾಧ್ಯಕ್ಷರಾಗಿರುವುದು ಹಾಗೂ ಕುಷ್ಟಗಿ ಕ್ಷೇತ್ರದಲ್ಲಿ ಮೊದಲಾದ್ಯತೆಯಾಗಿ ಹಸನಸಾಬ್ ದೋಟಿಹಾಳ ಸಂಪರ್ಕಿಸಿರುವುದು ಜೆಡಿಎಸ್ ಸೇರುವುದೇಕಾರಣ ಎನ್ನಲಾಗುತ್ತಿದೆ. ಮುಸ್ಲಿಂ ಮತ ವಿಭಜನೆಗೆ ಬ್ರೇಕ್ ಹಾಕಲು ಹಾಗೂ ಇತರೇ ಸಮುದಾಯದ ಬೆಂಬಲದೊಂದಿಗೆ 2023 ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಇದೀಗ ಮುನ್ನೆಲೆಗೆ ಬಂದಂತಾಗಿದೆ.
ಇದನ್ನೂ ಓದಿ:ಕಾಶ್ಮೀರಿ ನಟಿಯ ಮನೆಯ ಮೇಲೆ ದಾಳಿ ಮಾಡಿದ ಲಷ್ಕರ್ ಉಗ್ರರು; ನಟಿ ಸಾವು!
ಈ ಕುರಿತು ಜೆಡಿಎಸ್ ಜಿಲ್ಲಾಧ್ಯಕ್ಷ ಅಮರೇಗೌಡ ಎ ಪಾಟೀಲ ಪ್ರತಿಕ್ರಿಯಿಸಿ ಕಳೆದ ಆರೇಳು ತಿಂಗಳ ಹಿಂದೆಯೇ ಹಸನಸಾಬ್ ದೋಟಿಹಾಳ ಅವರನ್ನು ಸಂಪರ್ಕಿಸುತ್ತಿದ್ದೇವು. ಆದರೆ ಅವರು ಮುಂದೆ ನೋಡೋಣ ಎಂದು ತಿಳಿಸಿದ್ದರು. ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ಸಿಎಂ ಇಬ್ರಾಹಿಂ ಅವರು ಹಸನಸಾಬ್ ದೋಟಿಹಾಳ ಸಂಪರ್ಕಿಸುವುದು ನಮಗೆ ಗೊತ್ತಿಲ್ಲ ಎಂದಿದ್ದಾರೆ.