
ಈ ವರ್ಷವೂ ಗ್ರಾಮ ಪಂಚಾಯತ್ಗಳಿಗೆ ಗಾಂಧಿ ಪುರಸ್ಕಾರ ಕನಸು?
ಕೊರೊನಾ ಕಾರಣದಿಂದ 2 ವರ್ಷಗಳಿಂದ ಪ್ರಶಸ್ತಿ ಬಾಕಿ
Team Udayavani, Sep 12, 2022, 7:33 AM IST

ಬೆಂಗಳೂರು: ಎರಡು ವರ್ಷಗಳಿಂದ ಗ್ರಾಮ ಪಂಚಾಯತ್ಗಳಿಗೆ “ಗಾಂಧಿ ಗ್ರಾಮ ಪುರಸ್ಕಾರ’ ಸಿಕ್ಕಿಲ್ಲ. ಈ ವರ್ಷವೂ ಸಿಗುವುದು ಅನುಮಾನ!
ಗ್ರಾ.ಪಂ.ಗಳ ಆರ್ಥಿಕ ಮತ್ತು ಆಡಳಿತಾತ್ಮಕ ಸಾಧನೆಯನ್ನು ಆಧರಿಸಿ ಅವುಗಳಿಗೆ ಹೆಚ್ಚಿನ ಉತ್ತೇಜನ ನೀಡಲು ಪ್ರತೀ ತಾಲೂಕಿನ ಒಂದು ಗ್ರಾ.ಪಂ.ಗೆ ಮಹಾತ್ಮಾ ಗಾಂಧೀಜಿ ಜಯಂತಿ ಯಾದ ಅ. 2ರಂದು ಗಾಂಧಿ ಗ್ರಾಮ ಪುರಸ್ಕಾರ ನೀಡಲಾಗುತ್ತದೆ. ಆದರೆ 2019-20 ಮತ್ತು 2020-21 ಸಾಲಿನಲ್ಲಿ ಗ್ರಾ.ಪಂ.ಗಳನ್ನು ಆಯ್ಕೆ ಮಾಡಿದ್ದರೂ ಕೊರೊನಾ ಕಾರಣದಿಂದ ಪುರಸ್ಕಾರ ನೀಡಲಾಗಿರಲಿಲ್ಲ. ಈ ವರ್ಷ ಗ್ರಾ.ಪಂ.ಗಳ ಆಯ್ಕೆ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಗಾಂಧಿ ಜಯಂತಿಗೆ 21 ದಿನಗಳಷ್ಟೇ ಬಾಕಿ ಇದೆ.
ಆರ್ಥಿಕ ಮತ್ತು ಆಡಳಿತ ಮಾನದಂಡಗಳ ಆಧಾರದ ಮೇಲೆ ಗ್ರಾ.ಪಂ.ಗಳ ಶೇ. 90ರಿಂದ 95ರಷ್ಟು ಸಾಧನೆಯನ್ನು ಮೌಲ್ಯಮಾಪನ ಮಾಡಿ ಸೂಕ್ತ ಪ್ರೋತ್ಸಾಹ ನೀಡಲು 2013-14ರಲ್ಲಿ ಸರಕಾರ ಗಾಂಧಿ ಗ್ರಾಮ ಪುರಸ್ಕಾರವನ್ನು ಜಾರಿಗೆ ತಂದಿತ್ತು. ಪುರಸ್ಕಾರಕ್ಕೆ ಆಯ್ಕೆಯಾಗುವ ಗ್ರಾ.ಪಂ.ಗಳಿಗೆ 2 ಲಕ್ಷ ರೂ. ವಿಶೇಷ ಅನುದಾನ ನೀಡಲಾಗುತ್ತದೆ. ಯೋಜನೆ ಜಾರಿಗೆ ಬಂದ ಬಳಿಕ ನಿಯಮಿತವಾಗಿ ಪ್ರತೀ ವರ್ಷ ಪುರಸ್ಕಾರ ನೀಡಲಾಗಿತ್ತು. 2019-20ನೇ ಸಾಲಿನಿಂದ ನೀಡಲಾಗಿಲ್ಲ.
ಪಂಚಾಯತ್ಗಳಿಗೆ ಬೇಸರ
ಅಧಿಕಾರ ವಿಕೇಂದ್ರೀಕರಣದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಗ್ರಾ.ಪಂ.ಗಳು 24ಕ್ಕೂ ಹೆಚ್ಚು ಇಲಾಖೆಗಳ 29 ಅಭಿವೃದ್ಧಿ ವಿಷಯಗಳ ಅನುಷ್ಠಾನ ಮತ್ತು ನಿರ್ವಹಣೆ ಮಾಡುತ್ತವೆ. ಜತೆಗೆ ಮೂಲಸೌಕರ್ಯಗಳಾದ ಕುಡಿಯುವ ನೀರು, ನೈರ್ಮಲ್ಯ, ಬೀದಿ ದೀಪಗಳ ನಿರ್ವಹಣೆ, ಪೌರ ಸೇವೆಗಳ ಜವಾಬ್ದಾರಿ ಅವುಗಳ ಮೇಲಿದೆ. ಪಂಚಾಯತ್ಗಳಿಗೆ ಹೆಚ್ಚು ಪ್ರೋತ್ಸಾಹ, ನೆರವು ಸಿಕ್ಕಿದರೆ ಇನ್ನಷ್ಟು ಚೆನ್ನಾಗಿ ಕೆಲಸ ಮಾಡಲು ಪ್ರೇರಣೆ ಸಿಗುತ್ತದೆ. ಇದೇ ಉದ್ದೇಶಕ್ಕಾಗಿ ಗಾಂಧಿ ಗ್ರಾಮ ಪುರಸ್ಕಾರ ಯೋಜನೆಯನ್ನು ಜಾರಿಗೆ ತರಲಾಗಿದೆ. ಪುರಸ್ಕಾರಕ್ಕೆ ಆಯ್ಕೆಯಾದ ಪಂಚಾಯತ್ಗಳಿಂದ ಬೇರೆ ಪಂಚಾಯತ್ಗಳಿಗೆ ಪ್ರೇರಣೆ ಸಿಗಲಿದೆ. ಆದರೆ ಎರಡು ವರ್ಷಗಳ ಪುರಸ್ಕಾರ ಸಿಕ್ಕಿಲ್ಲ. ಈ ವರ್ಷ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪಂಚಾಯತ್ಗಳು ಬೇಸರ ವ್ಯಕ್ತಪಡಿಸಿವೆ.
ಮುಖ್ಯಮಂತ್ರಿಗೆ ಮನವಿ
ಸ್ಥಳೀಯ ಸರಕಾರಗಳಾದ ಗ್ರಾ.ಪಂ.ಗಳನ್ನು ಸದೃಢಗೊಳಿಸುವ ಹಾಗೂ ಉತ್ತಮ ಆಡಳಿತ ವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದ ಗಾಂಧಿ ಗ್ರಾಮ ಪುರಸ್ಕಾರ ವಿತರಣೆಯನ್ನು ಸರಕಾರ ಮುಂದುವರಿಸ ಬೇಕು. ಈ ಹಿಂದೆ ಆಯ್ಕೆ ಮಾಡಿರುವ ಗ್ರಾ.ಪಂ.ಗಳಿಗೆ ಪುರಸ್ಕಾರಗಳನ್ನು ನೀಡಬೇಕು ಮತ್ತು ಪುರಸ್ಕಾರದ ಮೊತ್ತವನ್ನು 10 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕು ಎಂದು ಕರ್ನಾಟಕ ರಾಜ್ಯ ಗ್ರಾ.ಪಂ. ಸದಸ್ಯರ ಮಹಾ ಒಕ್ಕೂಟ ಮುಖ್ಯ ಮಂತ್ರಿಯವರಿಗೆ ಮನವಿ ಸಲ್ಲಿಸಿದೆ.
ಎರಡು ವರ್ಷಗಳಿಂದ ಗಾಂಧಿ
ಗ್ರಾಮ ಪುರಸ್ಕಾರ ನೀಡಿಲ್ಲ. ಈ ವರ್ಷ ಇಲ್ಲಿಯ ವರೆಗೆ ಗ್ರಾ.ಪಂ.ಗಳ ಆಯ್ಕೆ ಪ್ರಕ್ರಿಯೆ ಆರಂಭಿಸಿಲ್ಲ. ಇದಕ್ಕೆ ಪಂಚಾಯತ್ಗಳಿಂದ ಬೇಸರ ವ್ಯಕ್ತವಾಗುತ್ತಿದೆ. ಆದ್ದರಿಂದ ಮುಖ್ಯ ಮಂತ್ರಿಯವರಿಗೆ ಮನವಿ ಸಲ್ಲಿಸಲಾಗಿದೆ.
-ಕಾಡಶೆಟ್ಟಿಹಳ್ಳಿ ಸತೀಶ್,
ಅಧ್ಯಕ್ಷ, ಕರ್ನಾಟಕ ರಾಜ್ಯ ಗ್ರಾ.ಪಂ. ಸದಸ್ಯರ
ಮಹಾ ಒಕ್ಕೂಟ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಾನಪದ ಪ್ರಪಂಚ ಪ್ರಶಸ್ತಿ ಪ್ರದಾನ; ಅಧಿಕಾರಕ್ಕೆ ಬಂದ ಕೂಡಲೇ ವಿಶೇಷ ಅನುದಾನ: ಸಿದ್ದರಾಮಯ್ಯ

360 ಡಿಗ್ರಿ ಬ್ರ್ಯಾಂಡಿಂಗ್ ಪ್ರಚಾರ ನಡೆಸಲು ಕಾಂಗ್ರೆಸ್ ಮುಖಂಡರಿಗೆ ಟಾಸ್ಕ್

ಪ್ರತಿಪಕ್ಷದ ನಾಯಕರನ್ನು ಹೀಗಳೆದಾಗ ಭಾರತದ ಗೌರವಕ್ಕೆ ಧಕ್ಕೆ ಉಂಟಾಗುವುದಿಲ್ಲವೇ : ಸಿದ್ದರಾಮಯ್ಯ

ಬೆಂಗಳೂರು ಏರೋ ಇಂಡಿಯಾ ಶೋ ; ಮಾಂಸ ಮಾರಾಟ ಬಂದ್

ದಾಖಲೆ ಸಮೇತ ದೂರು ನೀಡಿದರೆ ದೂರುದಾರಿಗೂ ರಕ್ಷಣೆ : ಲೋಕಾಯುಕ್ತ ಪಾಟೀಲ್
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
