ಕೋವಿಡ್ ಅಂಕಿ-ಅಂಶ ಮುಚ್ಚಿಡುವ ಅವಶ್ಯಕತೆ ಸರ್ಕಾರಕ್ಕಿಲ್ಲ: ಡಾ.ಕೆ.ಸುಧಾಕರ್
ಉತ್ತರ ಕೇಳದೆ ಕಾಂಗ್ರೆಸ್ ಪಲಾಯನ ಮಾಡಿದೆ ಎಂದು ಟೀಕೆ
Team Udayavani, Sep 24, 2021, 9:30 PM IST
ವಿಧಾನಸಭೆ: ಕೋವಿಡ್ ದಿಂದ ಉಂಟಾದ ಸಾವಿನ ಸಂಖ್ಯೆಯನ್ನು ಮುಚ್ಚಿಡುತ್ತಿದ್ದೇವೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪ ಸತ್ಯಕ್ಕೆ ದೂರ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಕಾಂಗ್ರೆಸ್ ಪ್ರತಿಭಟನೆ ನಡುವೆಯೇ ಕೋವಿಡ್ ಕುರಿತ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರ ಮಂಡಿಸಿದ ಅವರು, ಕೋವಿಡ್ ಅಂಕಿ ಅಂಶಗಳನ್ನು ಮುಚ್ಚಿಡುವ ಯಾವುದೇ ಅವಶ್ಯಕತೆ ಆಗಲಿ ಅಥವಾ ಉದ್ದೇಶ ಆಗಲಿ ನಮ್ಮ ಸರ್ಕಾರಕ್ಕೆ ಇಲ್ಲ. ಐಸಿಎಂಆರ್ ಮಾರ್ಗಸೂಚಿ ಪ್ರಕಾರವೇ ಎಲ್ಲ ಅಂಕಿ ಅಂಶಗಳು ದಾಖಲಾಗುತ್ತವೆ ಎಂದು ಹೇಳಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಸುವರ್ಣ ಆರೋಗ್ಯ ಸುರಕ್ಷತಾ ಟ್ರಸ್ಟ್ ನಲ್ಲಿ ಆಗಿರುವ ಕ್ಲೇಮುಗಳೆಲ್ಲಾ ಮರಣಗಳು ಎಂದು ತಪ್ಪಾಗಿ ಸದನಕ್ಕೆ ಮಾಹಿತಿ ನೀಡಿದ್ದಾರೆ. ಎಸ್ಎಎಸ್ಟಿ ಸಂಸ್ಥೆ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ವಿಮೆ ಯೋಜನೆ ಅನುಷ್ಠಾನಗೊಳಿಸುವ ನೋಡಲ್ ಏಜೆನ್ಸಿ ಆಗಿದ್ದು, 2 ಲಕ್ಷಕ್ಕೂ ಹೆಚ್ಚು ಕ್ಲೇಮ್ ಬಂದಿರುವುದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಸೋಂಕಿತರದ್ದು ಎಂದು ತಿಳಿಸಿದರು.
ಮೂಲಸೌಕರ್ಯ ಅಭಿವೃದ್ಧಿ
ಕೋವಿಡ್ ಮೊದಲ ಅಲೆಗೆ ಮುನ್ನ ವೈದ್ಯಕೀಯ ಶಿಕ್ಷಣ ಇಲಾಖೆಯ ಆಸ್ಪತ್ರೆಗಳಲ್ಲಿ 413, ಆರೋಗ್ಯ ಇಲಾಖೆ ಆಸ್ಪತ್ರೆಗಳಲ್ಲಿ 312 ಸೇರಿ ಒಟ್ಟು 725 ಐಸಿಯು ಹಾಸಿಗೆ ಇತ್ತು. ಮೊದಲ ಅಲೆ ವೇಳೆಗೆ 858 ಹಾಗೂ ಎರಡನೇ ಅಲೆ ವೇಳೆಗೆ 1,961 ಕ್ಕೆ ಏರಿಸಿ ಆಗಸ್ಟ್ ವೇಳೆಗೆ 3,877 ಹಾಸಿಗೆ ಲಭ್ಯವಿದೆ. ಅದೇ ರೀತಿ ಆಕ್ಸಿಜನ್ ಹಾಸಿಗೆ, ಸಾಮಾನ್ಯ ಹಾಸಿಗೆ, ಆಕ್ಸಿಜನ್ ಸಿಲಿಂಡರ್, ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಪ್ರಮಾಣ ಸಹ ಹೆಚ್ಚಿಸಲಾಯಿತು ಎಂದು ಹೇಳಿದರು.
ಇದನ್ನೂ ಓದಿ:ರಾಜ್ಯಕ್ಕೆ ಬಂದ ಲೋಕಸಭೆ ಸಭಾಧ್ಯಕ್ಷರಿಗೆ ಅಗೌರವ ಸಲ್ಲ: ಹೆಚ್.ಡಿ.ಕುಮಾರಸ್ವಾಮಿ
ರಾಜ್ಯದಲ್ಲಿ ಲಸಿಕೆ ದಾಖಳೆ ಪ್ರಮಾಣದಲ್ಲಿ ನೀಡಲಾಗಿದೆ. ಸೆಪ್ಟೆಂಬರ್ 24 ಕ್ಕೆ 5.39 ಕೋಟಿ ರೂ. ಡೋಸ್ ನೀಡಲಾಗಿದೆ. ರಾಜ್ಯ ಸರ್ಕಾರ 4.89 ಕೋಟಿ ಡೋಸ್ ಪಡೆದಿದೆ. ಈ ಪೈಕಿ ಕೇಂದ್ರ ಸರ್ಕಾರದಿಂದ 4.63 ಕೋಟಿ ಡೋಸ್ ಪೂರೈಕೆಯಾಗಿದೆ ಎಂದು ತಿಳಿಸಿದರು.
ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಡಿ 2.75 ಲಕ್ಷ ಕೋವಿಡ್ ಸೋಂಕಿತರು ಉಚಿತ ಚಿಕಿತ್ಸೆ ಪಡೆದಿದ್ದಾರೆ ಎಂದು ಹೇಳಿದರು.
ಚಾಮರಾಜನಗರದಲ್ಲಿ ನಡೆದ ದುರಂತ ಸಂಬಂಧ ನ್ಯಾ. ಎ.ಬಿ. ಪಾಟೀಲ್ ಸಮಿತಿ ವರದಿ ನಿರೀಕ್ಷಿಸಲಾಗುತ್ತಿದ್ದು ವರದಿ ಬಂದ ತಕ್ಷಣ ಸೂಕ್ರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕೋವಿಡ್ ನಿರ್ವಹಣೆ ಕುರಿತ ಚರ್ಚೆಗೆ ಸರ್ಕಾರದ ಉತ್ತರ ಕೇಳದೆ ಕಾಂಗ್ರೆಸ್ ಪಲಾಯನ ಮಾಡಿದೆ. ಜನರ ಆರೋಗ್ಯದ ಬಗ್ಗೆ ಆ ಪಕ್ಷಕ್ಕೆ ಇರುವ ಕಾಳಜಿ ಮತ್ತು ಬದ್ಧತೆ ಬಟಾ ಬಯಲು ಆಗಿದೆ.
-ಡಾ.ಕೆ.ಸುಧಾಕರ್