ಭವಿಷ್ಯದ ಮೇಲೆ ಸರ್ಕಾರ ನಡೆಯಲ್ಲ
Team Udayavani, Sep 21, 2019, 3:06 AM IST
ಬಾಗಲಕೋಟೆ: ಯಾವುದೇ ಸರ್ಕಾರ ಭವಿಷ್ಯದ ಮೇಲೆ ನಡೆಯಲ್ಲ. ಕೆಲವರು ಮೂರು ತಿಂಗಳು ಅಂದರೆ, ಇನ್ನೂ ಕೆಲವರು ಐದು ವರ್ಷ ಎಂದು ಹೇಳುತ್ತಾರೆ. ಹೀಗಾಗಿ ಬಿಜೆಪಿ ಸರ್ಕಾರ ಭವಿಷ್ಯದ ಮೇಲೆ ನಡೆಯಲ್ಲ ಎಂದು ಬೃಹತ್ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಸರ್ಕಾರ ಮೂರು ತಿಂಗಳಲ್ಲಿ ಬೀಳುತ್ತದೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಐದು ವರ್ಷ ಎಂದು ಹೇಳುತ್ತಾರೆ. ಆದರೆ, ಭವಿಷ್ಯದ ಮೇಲೆ ಸರ್ಕಾರ ನಡೆಯಲ್ಲ. ಕೇಂದ್ರ ಸರ್ಕಾರದಿಂದ ಇಂದಲ್ಲ ನಾಳೆ ಪರಿಹಾರ ಬರುತ್ತದೆ. ಪ್ರವಾಹ ಸಂತ್ರಸ್ತರಿಗೆ ಸ್ಪಂದಿಸುವ ಉದ್ದೇಶದಿಂದಲೇ ರಾಜ್ಯ ಸರ್ಕಾರ ತಕ್ಷಣ 1 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದೆ.
ಬೆಳೆ ಹಾನಿಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕಾಗುತ್ತದೆ. ಎನ್ಡಿಆರ್ಎಫ್ ನಿಯಮದ ಪ್ರಕಾರ ಕೇಂದ್ರದ ಅನುದಾನದ ಜತೆಗೆ ರಾಜ್ಯ ಸರ್ಕಾರ 6200 ಸೇರಿಸಿ ಸಂತ್ರಸ್ತ ಕುಟುಂಬಕ್ಕೆ 10 ಸಾವಿರ ರೂ. ತಾತ್ಕಾಲಿಕ ಪರಿಹಾರ ನೀಡಿದೆ. ಪೂರ್ಣ ಬಿದ್ದ ಮನೆಗೆ 5 ಲಕ್ಷ ಪರಿಹಾರ ನೀಡಲಾಗುತ್ತಿದೆ. ಭಾರತದಲ್ಲಿ ಮಾತ್ರ ಆರ್ಥಿಕ ಹಿಂಜರಿತ ಇಲ್ಲ. ಇದು ಜಾಗತಿಕ ಮಟ್ಟದಲ್ಲೂ ಇದೆ. ಇದೆಲ್ಲ ತಾತ್ಕಾಲಿಕ ಎಂದರು.