ರಾಮನಗರದಲ್ಲಿ ಕುಮಾರಸ್ವಾಮಿ ಆಪರೇಷನ್! ಡಿಕೆ ಬ್ರದರ್ಸ್ ಗೆ ಟಕ್ಕರ್ ಕೊಡುತ್ತಾರಾ ಎಚ್ ಡಿಕೆ?
Team Udayavani, May 23, 2022, 11:30 AM IST
ಬೆಂಗಳೂರು: ಚುನಾವಣೆ ಸಮೀಪವಾಗುತ್ತಿದ್ದಂತೆ ಹಳೆ ಮೈಸೂರು ಭಾಗದಲ್ಲಿ ರಾಜಕೀಯ ಲೆಕ್ಕಾಚಾರಗಳು ಬದಲಾಗುತ್ತಿದ್ದು, ಕಾಂಗ್ರೆಸ್ ಗೆ ಆಪರೇಷನ್ ಮಾಡಲು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ.
ಜೆಡಿಎಸ್ ಬಿಟ್ಟು ಹೋದವರನ್ನು ಮರಳಿ ಪಕ್ಷಕ್ಕೆ ಕರೆ ತರುವುದಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಇದರ ಮೊದಲ ಪ್ರಯತ್ನವಾಗಿ ಮಾಗಡಿ ಬಾಲಕೃಷ್ಣ ಅವರಿಗೆ ಗಾಳ ಹಾಕಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಬಾಲಕೃಷ್ಣ ಎದುರು ಮಂಜುನಾಥ್ ಅವರನ್ನು ನಿಲ್ಲಿಸಿದ್ದ ಜೆಡಿಎಸ್ ಗೆಲುವು ಸಾಧಿಸಿತ್ತು. ಇದಾದ ಬಳಿಕ ಬಾಲಕೃಷ್ಣ ಅವರಿಗೆ ರಾಜಕೀಯ ಏಳಿಗೆ ಸಾಧ್ಯವಾಗಿಲ್ಲ. ಹೀಗಾಗಿ ಮರಳಿ ಗೂಡು ಸೇರುವುದಕ್ಕೆ ಮಾನಸಿಕವಾಗಿ ಸಿದ್ದರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಒಂಟಿಯಾಗುತ್ತಿದ್ದಾರೆಯೇ? ಹೈಕಮಾಂಡ್ ನೀಡಿದ ಸಂದೇಶವೇನು?
ಈ ಸಂಬಂಧ ಕುಮಾರಸ್ವಾಮಿಯವರ ಜತೆಗೆ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಮಾಗಡಿ ಮಂಜುನಾಥ್ ಅವರನ್ನು ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿ, ಬಾಲಕೃಷ್ಣ ಅವರಿಗೆ ಮಾಗಡಿ ವಿಧಾನಸಭಾ ಕ್ಷೇತ್ರ ಬಿಟ್ಟು ಕೊಡುವ ಸಾಧ್ಯತೆ ಇದೆ. ಈ ಮೂಲಕ ರಾಮನಗರ ಜಿಲ್ಲೆಯಲ್ಲೇ ಡಿ.ಕೆ.ಸೋದರರಿಗೆ ಮುಖಭಂಗ ಮಾಡುವುದು ಕುಮಾರಸ್ವಾಮಿ ಲೆಕ್ಕಾಚಾರ ಎಂದು ಹೇಳಲಾಗುತ್ತಿದೆ.