ಇಂಧನ ಖಾತೆಗೆ ಬೇಡಿಕೆ ಇಟ್ಟಿರುವ ಎಚ್.ನಾಗೇಶ್
Team Udayavani, Jun 22, 2019, 3:00 AM IST
ಬೆಂಗಳೂರು: ಸಮ್ಮಿಶ್ರ ಸರ್ಕಾರದ ಸಂಪುಟ ಸೇರ್ಪಡೆಯಾಗಿರುವ ಪಕ್ಷೇತರ ಶಾಸಕ ಎಚ್.ನಾಗೇಶ್ ಇಂಧನ ಖಾತೆಗೆ ಬೇಡಿಕೆ ಇಟ್ಟಿರುವುದೇ ಖಾತೆ ಹಂಚಿಕೆಯಲ್ಲಿ ವಿಳಂಬಕ್ಕೆ ಕಾರಣ ಎಂದು ಹೇಳಲಾಗಿದೆ.
ಕೆಪಿಟಿಸಿಎಲ್ ತಾಂತ್ರಿಕ ನಿರ್ದೇಶಕರಾಗಿ ಸ್ವಯಂ ನಿವೃತ್ತಿ ಪಡೆದು ರಾಜಕೀಯ ಪ್ರವೇಶಿಸಿ ಶಾಸಕರಾದ ನಾಗೇಶ್ ಮಂತ್ರಿಮಂಡಲ ಸೇರ್ಪಡೆಯಾದ ನಂತರ ಇಂಧನ ಖಾತೆ ಕೊಡಿ, ನಾನು ಕೆಪಿಟಿಸಿಎಲ್ನಲ್ಲಿ ಕೆಲಸ ಮಾಡಿರುವುದರಿಂದ ಅನುಭವ ಇದೆ, ನಿಭಾಯಿಸುತ್ತೇನೆ ಎಂದು ಬೇಡಿಕೆ ಇಟ್ಟಿರುವುದರಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಖಾತೆ ಹಂಚಿಕೆ ಇನ್ನೂ ಮಾಡಿಲ್ಲ ಎಂದು ಹೇಳಿದ್ದಾರೆಂದು ತಿಳಿದು ಬಂದಿದೆ.
ಶಂಕರ್ಗೆ ಪೌರಾಡಳಿತ ಹಾಗೂ ನಾಗೇಶ್ಗೆ ಜವಳಿ ಖಾತೆ ಕೊಡಲು ಮುಖ್ಯಮಂತ್ರಿಯವರು ನಿರ್ಧರಿಸಿದ್ದರು. ಆದರೆ, ನಾಗೇಶ್, ಶಿವಳ್ಳಿಯವರ ಪೌರಾಡಳಿತ ಖಾತೆ ಶಂಕರ್ಗೆ ಕೊಟ್ಟರೆ ನನಗೆ ಎನ್.ಮಹೇಶ್ ಅವರಿಗೆ ನೀಡಿದ್ದ ಶಿಕ್ಷಣ ಖಾತೆ ಕೊಡಬೇಕಿತ್ತು. ನನಗೆ ಇಂಧನ ಖಾತೆಯನ್ನಾದರೂ ಕೊಡಿ ಎಂದು ಕೇಳುತ್ತಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿಯವರು ಗ್ರಾಮ ವಾಸ್ತವ್ಯಕ್ಕೆ ತೆರಳುವ ಮುನ್ನವೇ ಶುಕ್ರವಾರ ಒಂದು ವರ್ಷದ ಸಾಧನೆಯ ಮೈತ್ರಿಪರ್ವ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹಾಜರಿದ್ದ ಇಬ್ಬರೂ ಖಾತೆ ಹಂಚಿಕೆಗೆ ಮನವಿ ಮಾಡಿದರು. ಸಂಜೆಯೊಳಗೆ ಮಾಡುತ್ತೇನೆಂದು ಮುಖ್ಯಮಂತ್ರಿ ಭರವಸೆ ನೀಡಿದ್ದರು. ಆದರೆ, ಖಾತೆ ಹಂಚಿಕೆಯಾಗಲಿಲ್ಲ. ಶುಕ್ರವಾರ ಖಾತೆ ಹಂಚಿಕೆಯಾಗುವ ನಿರೀಕ್ಷೆ ಇತ್ತಾದರೂ ಅದೂ ಆಗಲಿಲ್ಲ.