ಜಮೀರ್ ಎಂಬ ಕೊಚ್ಚೆ ಮೇಲೆ ಕಲ್ಲು ಎಸೆಯಲ್ಲ : ಎಚ್ ಡಿಕೆ
Team Udayavani, Oct 26, 2021, 7:11 PM IST
ವಿಜಯಪುರ: ಜಮೀರ್ ಅದೊಂದು ಕೊಚ್ಚೆ, ಅದರ ಮೇಲೆ ಕಲ್ಲು ಹಾಕಿದರೆ ನಮ್ಮ ಮೇಲೆ ಬೀಳುತ್ತದೆ. ಕಾರಣ ಕೊಚ್ಚೆ ಮೇಲೆ ಕಲ್ಲು ಎಸೆಯುವ ಕೆಲಸ ಮಾಡಲಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕಾ ಪ್ರಹಾರ ನಡೆಸಿದ್ದಾರೆ.
ಮಂಗಳವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈಗ ಜಮೀರ್ ಅಲ್ಪಸಂಖ್ಯಾತರ ಎದುರುಹೋಗಿ ಬಿಜೆಪಿಗೆ ಅಧಿಕಾರ ಬಿಟ್ಟುಕೊಡಿ ಅಂತ ನನಗೆ ತೊಂದರೆ ಕೊಟ್ಟಿದ್ದನ್ನು ಹೋಗಿ ಈಗ ಹೇಳಲಿ. ನಾನು ಬಿಬಿಎಂಪಿ ಕಸ ಎತ್ತುವ ಟೆಂಡರ್ ಪಡೆದಿದ್ದು ನಿಜ. ಆಗ ದೇವೇಗೌಡರು ನನ್ನನ್ನು ಕರೆದು ನಾನು ಅಧಿಕಾರದಲ್ಲಿ ಇರುವಾಗ ಇಂಥದ್ದೆಲ್ಲ ಬೇಡ ಎಂದು ಸಲಹೆ ನೀಡಿದಾಗ ಕಸ ವಿಲೇವಾರಿ ಟೆಂಡರ್ ಕೈಬಿಟ್ಟೆ ಎಂದು ವಿವರಿಸಿದರು.
ಕುಮಾರಸ್ವಾಮಿ ಕರ್ಚೀಫ್ ಗೆ ಗ್ಲಿಸರೀನ್ ಹಾಕಿಕೊಂಡು ಅಳುತ್ತಾರೆ ಎಂದು ಈ ಹಿಂದೆಯೇ ಟೀಕಿಸಿದ್ದಾರೆ. ನಮ್ಮ ಕುಟುಂಬದವರು ಭಾವನಾತ್ಮಕ ಜೀವಿಗಳು. ಭಾವನೆಗಳಿಂದಾಗಿ ಕಣ್ಣೀರು ಬರುತ್ತೆ ಎಂದು ಕುಮಾರಸ್ವಾಮಿ ಗದ್ಗದಿತರಾದರು. ಅಲ್ಲದೇ ಕೈಯಲ್ಲಿದ್ದ ಕರ್ಚೀಫ್ ಮುಂದೆ ಹಿಡಿದು, ನೀವೇ ನೋಡಿ, ತಗೊಳ್ಳಿ ಇದರಲ್ಲೇನಿದೆ ನೋಡಿ ಎಂದು ತಮ್ಮ ಕೈಯಲ್ಲಿದ್ದ ಕರವಸ್ತ್ರವನ್ನು ಪತ್ರಕರ್ತರ ಕೈಗೆ ಕರ್ಚೀಫ್ ಕೊಡಲು ಮುಂದಾದರು.