ಆನೆ ಶಿಬಿರಗಳ ವಸ್ತುಸ್ಥಿತಿ ಅಧ್ಯಯನಕ್ಕೆ ತಜ್ಞರ ಸಮಿತಿ ರಚನೆಗೆ ಹೈ ಆದೇಶ
Team Udayavani, Sep 12, 2019, 3:07 AM IST
ಬೆಂಗಳೂರು: ಮತ್ತಿಗೋಡು, ಸಕ್ರೆಬೈಲು ಹಾಗೂ ದುಬಾರೆ ಸೇರಿ ಸರ್ಕಾರದಿಂದ ನಿರ್ವಹಿಸಲ್ಪಡುತ್ತಿರುವ ರಾಜ್ಯದ 8 ಆನೆ ಶಿಬಿರಗಳ ಸ್ಥಿತಿಗತಿಗಳ ಅಧ್ಯಯನ ನಡೆಸಲು ತಜ್ಞರ ಸಮಿತಿ ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಬುಧವಾರ ಆದೇಶ ಮಾಡಿದೆ. ಈ ಕುರಿತು ವಕೀಲ ಎನ್.ಪಿ.ಅಮೃತೇಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯ ಮೂರ್ತಿ ಎ.ಎಸ್.ಓಕ್ ಹಾಗೂ ನ್ಯಾ.ಮೊಹಮ್ಮದ್ ನವಾಜ್ ಅವರಿದ್ದ ವಿಭಾ ಗೀಯ ನ್ಯಾಯಪೀಠ ಈ ಆದೇಶ ನೀಡಿದೆ.
ಈ ಹಿಂದೆ ಹೈಕೋರ್ಟ್ ನೀಡಿದ್ದ ನಿರ್ದೇಶನದಂತೆ ಅರ್ಜಿದಾರ ಎನ್.ಪಿ.ಅಮೃತೇಶ್ ಅವರು 9 ಮಂದಿ ತಜ್ಞರ ಪಟ್ಟಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಇದನ್ನು ಪರಿಶೀಲಿಸಿದ ನ್ಯಾಯಪೀಠ, ಅರ್ಜಿದಾರರ ಸಲಹೆಯಂತೆ ಏಷ್ಯನ್ ಎಲಿಫ್ಯಾಂಟ್ಸ್ ರೀಸರ್ಚ್ ಆ್ಯಂಡ್ ಕನ್ಸರ್ವೇಷನ್ ಸೆಂಟರ್ ಪ್ರೊ.ಆರ್.ಸುಕುಮಾರ್, ಥಾಮಸ್ ಮ್ಯಾಥ್ಯೂ, ಸುರೇಂದ್ರ ವರ್ಮ ಮತ್ತು ವೈಲ್ಡ್ ಲೈಫ್ ಫಸ್ಟ್ ಆರ್ಗನೈಸೇಷನ್ನ ಟ್ರಸ್ಟಿ ಕೆ.ಎಂ.ಚಿನ್ನಪ್ಪ ಅವರ ಹೆಸರನ್ನು ಅಂತಿಮಗೊಳಿಸಿ. ಈ ನಾಲ್ವರ ಸಮಿತಿ ರಚಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತು.
ತಜ್ಞರ ಸಮಿತಿ ಆನೆ ಶಿಬಿರಕ್ಕೆ ಭೇಟಿ ಕೊಟ್ಟಾಗ ಅಗತ್ಯ ಸಹಕಾರ ನೀಡಬೇಕು. ಈ ವೇಳೆ ಆನೆ ಶಿಬಿರಗಳ ಸದ್ಯದ ವಸ್ತುಸ್ಥಿತಿ, ಅಲ್ಲಿ ಆನೆಗಳಿಗೆ ಕೊಡಲಾಗುತ್ತಿರುವ ಆಹಾರ ಮತ್ತು ವೈದ್ಯಕೀಯ ಸೌಲಭ್ಯ ಸೇರಿದಂತೆ ಇತ್ತೀಚಿಗೆ ಆನೆಗಳು ಸಾವನ್ನಪ್ಪಲು ಕಾರಣಗಳೇನು ಎಂಬ ಬಗ್ಗೆ ಸಮಗ್ರ ವರದಿ ಸಲ್ಲಿಸಬೇಕು. ಈ ವಿಚಾರವಾಗಿ ಸರ್ಕಾರ ಮುಂದೇನು ಮಾಡಬೇಕು ಎಂಬ ಸಲಹೆಗಳನ್ನು ತಜ್ಞರ ವರದಿ ಒಳಗೊಂಡಿರಬೇಕು ಎಂದು ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಸೆ.19ಕ್ಕೆ ಮುಂದೂಡಿತು.
ಇದೇ ವೇಳೆ ಪ್ರತಿ ಆನೆ ಶಿಬಿರಕ್ಕೆ ತಲಾ ಒಬ್ಬರು ಪಶು ವೈದ್ಯರ ನಿಯೋಜನೆ ಸೇರಿದಂತೆ ಆನೆ ಶಿಬಿರಗಳ ವಿಚಾರವಾಗಿ ಹೈಕೋರ್ಟ್ ಜು.30ರಂದು ನೀಡಿರುವ ಆದೇಶ ಪಾಲಿಸಿದ ಬಗ್ಗೆ ಅನುಪಾಲನಾ ವರದಿ ಸಲ್ಲಿಸಲು ವಿಫಲವಾದರೆ ನ್ಯಾಯಾಲಯ ಅದನ್ನು ಗಂಭೀರವಾಗಿ ಪರಿಗಣಿಸಬೇಕಾ ಗುತ್ತದೆ ಎಂದು ನ್ಯಾಯಪೀಠ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.