ಅಗತ್ಯ ಬಿದ್ದರೆ ರಾಜ್ಯದಲ್ಲೂ ‘ಯೋಗಿ ಮಾದರಿ’ ಜಾರಿ: ಸಿಎಂ ಬೊಮ್ಮಾಯಿ
Team Udayavani, Jul 28, 2022, 12:18 PM IST
ಬೆಂಗಳೂರು: ಪ್ರಸಂಗ ಬಂದರೆ ಯೋಗಿ ಮಾದರಿ ಕರ್ನಾಟಕದಲ್ಲೂ ಜಾರಿಗೆ ಬರುತ್ತದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಮತಾಂಧ ಶಕ್ತಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೌಹಾರ್ದತೆ ಕದಡುವ ಕೆಲಸ ದೇಶದ ವಿವಿಧ ಕಡೆ ನಡೆದಿದೆ. ಕಳೆದ ಹತ್ತು ವರ್ಷದಲ್ಲಿ ಈ ಶಕ್ತಿ ತಲೆ ಎತ್ತಿದೆ. ಸ್ಲೀಪರ್ ಸೆಲ್ ನಲ್ಲಿರುವ ಉಗ್ರರನ್ನು ಜೈಲಿಗೆ ಕಳಿಸುವ ಕೆಲಸವನ್ನು ನಮ್ಮ ದಕ್ಷ ಪೊಲೀಸರು ಮಾಡಿದ್ದಾರೆ. ನಾವು ಕೈಕಟ್ಟಿ ಕುಳಿತಿಲ್ಲ ಎಂದರು.
ಪ್ರವೀಣ್ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಐದು ತಂಡ ಮಾಡಲಾಗಿದೆ. ಹರ್ಷನ ಕೊಲೆ ಪ್ರಕರಣದಲ್ಲಿ ತಕ್ಷಣ ದಸ್ತಗಿರಿ ಮಾಡಿದಂತೆ ಇಲ್ಲೂ ಆಗುತ್ತದೆ. ಇಂತ ಚಟುವಟಿಕೆ ವಿರುದ್ಧ ದೊಡ್ಡ ಸಮರ ಸಾರಿದ್ದೇವೆ. ಇದರ ಪರಿಣಾಮ ಜನರಿಗೆ ಮುಂದೆ ಗೊತ್ತಾಗುತ್ತದೆ ಎಂದು ಹೇಳಿದರು.
ಕಠಿಣ ಕ್ರಮದ ಸರ್ಕಾರ ಎಂದು ಜನ ಟೀಕಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ ನಾವು ಬಾಯಿಮಾತಲ್ಲಿ ಹೇಳಲ್ಲ, ಮಾಡಿ ತೋರಿಸಿದ್ದೇವೆ. ಶಿವಮೊಗ್ಗದಲ್ಲಿ, ಡಿಜೆ ಹಳ್ಳಿ ಕೆಜಿ ಹಳ್ಳಿ ಪ್ರಕರಣದಲ್ಲಿ ಮಾಡಿದ್ದೇವೆ ಎಂದರು.
ಇದನ್ನೂ ಓದಿ:ದ್ರೌಪದಿ ಮುರ್ಮುಗೆ ರಾಷ್ಟ್ರಪತ್ನಿ ಎಂದ ಅಧೀರ್ ರಂಜನ್, ಕಾಂಗ್ರೆಸ್ ಕ್ಷಮೆಯಾಚನೆಗೆ BJP ಪಟ್ಟು
ಪಿಎಫ್ ಐ ಹಾಗೂ ಎಸ್ ಡಿಪಿಐ ಬ್ಯಾನ್ ಮಾಡುವುದು ಕೇಂದ್ರ. ರಾಜ್ಯದಿಂದ ವರದಿ ಕಳಿಸಿದ್ದೇವೆ. ಇಡೀ ದೇಶದಲ್ಲಿ ಒಂದು ತೀರ್ಮಾನವಾಗುತ್ತದೆ. ಯಾವ ಯಾವ ವರದಿ ಕಳಿಸಬೇಕೋ ಅದನ್ನು ಕೊಟ್ಟಿದ್ದೇವೆ. ಆ ಪ್ರಕ್ರಿಯೆ ಪ್ರಾರಂಭವಾಗಿದೆ. ಆದಷ್ಟು ಬೇಗ ಕೇಂದ್ರದಿಂದ ತೀರ್ಮಾನ ಹೊರಬರುತ್ತದೆ ಎಂದರು.
ನಿಮ್ಮ ಸರ್ಕಾರಕ್ಕೆ ನೀವು ಎಷ್ಟು ಅಂಕ ಎಷ್ಟುಕೊಡುತ್ತೀರಿ ಎಂಬ ಪ್ರಶ್ನೆಗೆ ಜನ ನೂರಕ್ಕೆ ನೂರು ಅಂಕ ಕೊಟ್ಟಿದ್ದಾರೆ ಎಂದರು.
ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ಸಿಎಂ, ಮತ್ತೊಮ್ಮೆ ದೆಹಲಿಗೆ ಹೋದಾಗ ಕ್ಲೀಯರ್ ಮಾಡಿಕೊಳ್ಳುತ್ತೇನೆ. ಇವತ್ತು ಜೆಪಿ ನಡ್ಡಾ ರಾಜ್ಯಕ್ಕೆ ಬರುವುದಿತ್ತು, ಅದು ರದ್ದಾಗಿರುವದರಿಂದ ಮತ್ತೆ ದೆಹಲಿಗೆ ಹೋದಾಗ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇನೆ ಎಂದರು.