ಡಿಸಿಎಂ ಹುದ್ದೆ ನೀಡಿದರೆ ಒಪ್ಪಿಕೊಳ್ಳುತ್ತೇನೆ
Team Udayavani, Jan 30, 2020, 3:04 AM IST
ಚನ್ನರಾಯಪಟ್ಟಣ: “ನಾನು ಉಪಮುಖ್ಯಮಂತ್ರಿ ಆಗಬೇಕೆಂಬುದು ನನ್ನ ಕ್ಷೇತ್ರದ ಮತದಾರರು ಹಾಗೂ ವಾಲ್ಮೀಕಿ ಸಮುದಾಯದವರ ಆಸೆಯಾಗಿದೆ. ಆದರೆ, ಈ ಬಗ್ಗೆ ನಾನು ಎಲ್ಲಿಯೂ ಚಲಾಬಿ ಮಾಡು ವುದಿಲ್ಲ ಹಾಗೂ ಪಕ್ಷದಲ್ಲಿ ಈವರೆಗೆ ಯಾರೊಂದಿಗೂ ಪ್ರಸ್ತಾಪ ಮಾಡಿಲ್ಲ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಪುನರುಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, “ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ, ಪಕ್ಷ ಅಧಿಕಾರಕ್ಕೆ ಬರಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದೇವೆ.
ನಾನು ಡಿಸಿಎಂ ಆಗಬೇಕು ಎಂಬುದು ಜನರ ಬೇಡಿಕೆ. ಯಡಿಯೂರಪ್ಪ ಹಾಗೂ ಪಕ್ಷದ ಹೈಕಮಾಂಡ್ ನನಗೆ ಡಿಸಿಎಂ ಹುದ್ದೆ ನೀಡಿದರೆ ಅದನ್ನು ಸರಿಯಾಗಿ ನಿಭಾಯಿಸುವುದು ನನ್ನ ಜವಾಬ್ದಾರಿ. ಡಿಸಿಎಂ ನಿರೀಕ್ಷೆಯಲ್ಲೇ ನಾನು ಎಂದಿಗೂ ಕೆಲಸ ಮಾಡುತ್ತಿಲ್ಲ. ಯಾರಿಗೆ ಸಚಿವ ಸ್ಥಾನ ನೀಡಬೇಕೆಂಬುದು ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬಿಟ್ಟ ವಿಚಾರ’ ಎಂದರು.