ಬಯೋಮೆಟ್ರಿಕ್ ಅಳವಡಿಸಿದ ನಂತರ ಪಡಿತರ ಅಕ್ರಮ ನಿಯಂತ್ರಣ
Team Udayavani, Dec 15, 2018, 7:08 AM IST
ಸುವರ್ಣಸೌಧ: ರಾಜ್ಯದ ನ್ಯಾಯಬೆಲೆ ಅಂಗಡಿಗಳಲ್ಲಿ ಪಿಓಎಸ್ ಬಯೋಮೆಟ್ರಿಕ್ ಅಳವಡಿಸಿದ ನಂತರ ಅಕ್ರಮಗಳನ್ನು ಗಣನೀಯ ಪ್ರಮಾಣದಲ್ಲಿ ಹತೋಟಿಗೆ ತರಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹಮದ್ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ರಘುನಾಥ ಮಲ್ಕಾಪುರೆ ಪ್ರಶ್ನೆಗೆ ಉತ್ತರ ನೀಡಿದ ಸಚಿವರು ರಾಜ್ಯದಲ್ಲಿ 20 ಸಾವಿರಕ್ಕೂ ಅಧಿಕ ನ್ಯಾಯಬೆಲೆ ಅಂಗಡಿಗಳಿದ್ದು 19000 ಸಾವಿರ ಅಂಗಡಿಗಳಲ್ಲಿ ಬಯೋಮೆಟ್ರಿಕ್ ಅಳವಡಿಸಲಾಗಿದೆ. ಇದರಿಂದ ಅಕ್ರಮಕ್ಕೆ ಕಡಿವಾಣ ಹಾಕಿ ಸರ್ಕಾರಕ್ಕೆ 580 ಕೋಟಿ ರೂ ಉಳಿತಾಯವಾಗಿದೆ ಎಂದು ಹೇಳಿದರು. ಇದಕ್ಕೆ ಸಮಾಧಾನಗೊಳ್ಳದ ರಘುನಾಥ ಮಲ್ಕಾಪುರೆ, ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ಹಾಕಿದ ನಂತರವೂ ಬೀದರ ಜಿಲ್ಲೆಯಲ್ಲಿ ಬಡವರಿಗೆ ಸರ್ಕಾರ ವಿತರಣೆ
ಮಾಡುತ್ತಿರುವ ಅನ್ನಭಾಗ್ಯ ಯೋಜನೆಯಡಿ ಅಪಾರ ಪ್ರಮಾಣದ ಅಕ್ಕಿ ಮಧ್ಯವರ್ತಿಗಳ ಪಾಲಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ದೂರು ದಾಖಲು ಮಾಡಿಕೊಂಡರೂ ಯಾವುದೇ ಕ್ರಮವಾಗಿಲ್ಲ. ಹೀಗಾದರೆ ಬಡವರಿಗೆ
ಈ ಅಕ್ಕಿ ಹೇಗೆ ಸಿಗುತ್ತದೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಪಕ್ಷದ ಸದಸ್ಯರು ದನಿಗೂಡಿಸಿದರು. ಸರ್ಕಾರಕ್ಕೆ ಯಾವುದೇ ಅಕ್ರಮದ ವರದಿ ಬಂದಿಲ್ಲ. ಹಾಗೇನಾದರೂ ಅಕ್ರಮಗಳು ನಡೆದಿರುವ ಬಗ್ಗೆ ನಮಗೆ ಮಾಹಿತಿ ನೀಡಿದರೆ ಅದನ್ನು ಪರಿಶೀಲಿಸಿ ತಪ್ಪಿತಸ್ಥರ
ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಅಕ್ರಮದ ವರದಿಗೆ ಸಮಿತಿ ರಚಿಸಿಲ್ಲ
ವಿಧಾನಪರಿಷತ್: ವಕ್ಫ್ ಮಂಡಳಿಯಲ್ಲಿ ನಡೆದಿರುವ ಅಕ್ರಮಗಳ ವರದಿ ಸಲ್ಲಿಸಲು ಸರ್ಕಾರ ಯಾವುದೇ ಸಮಿತಿ ರಚಿಸಿಲ್ಲ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹಮದ್ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ
ವೈ.ಎ.ನಾರಾಯಣ ಸ್ವಾಮಿ, ವಕ್ಫ್ ಮಂಡಳಿ ಅಕ್ರಮ ಕುರಿತ ತನಿಖೆಗೆ ನೇಮಕವಾಗಿದ್ದ ಅನ್ವರ್ ಮಾಣಿಪ್ಪಾಡಿ ಆಯೋಗ ವರದಿ ನೀಡಿದ್ದು ಅದನ್ನು ಸದನದಲ್ಲಿ ಯಾವಾಗ ಮಂಡಿಸಲಾಗುವುದು ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಅಲ್ಪಸಂಖ್ಯಾತರ ಸಮಾಜಕ್ಕೆ
ಸೇರಿದ 54 ಸಾವಿರ ಎಕರೆ ಪ್ರದೇಶವಿದ್ದು ಅದರಲ್ಲಿ ಸುಮಾರು 27 ಸಾವಿರ ಎಕರೆ ಪ್ರದೇಶ ಅತಿಕ್ರಮಣವಾಗಿದೆ. ಇದು ಗಂಭೀರ ವಿಷಯ ಎಂದು ವಿರೋಧಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.