ಐಎಂಎ ಪ್ರಕರಣ: ಸಿಬಿಐಗೆ ಒಪ್ಪಿಸಿಸಲು ಸಂಸದರಿಂದ ಪತ್ರ
Team Udayavani, Jun 27, 2019, 3:00 AM IST
ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕರ್ನಾಟಕದ ಸಂಸದರು ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಪತ್ರಕ್ಕೆ 25 ಬಿಜೆಪಿ ಸಂಸದರು ಸಹಿ ಹಾಕಿದ್ದಾರೆ.
ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್ ಬಡವರ 5 ಸಾವಿರ ಕೋಟಿಗೂ ಅಧಿಕ ಹಣವನ್ನು ವಂಚನೆ ಮಾಡಿ, ಪರಾರಿಯಾಗಿದ್ದಾನೆ. ಐಎಂಎ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆರ್ಬಿಐ ಈ ಹಿಂದೆ ಸೂಚಿಸಿದ್ದರೂ, ಕರ್ನಾಟಕದ ಮೈತ್ರಿ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಪತ್ರದಲ್ಲಿ ದೂರಿದ್ದಾರೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಮನ್ಸೂರ್ ಖಾನ್ನೊಂದಿಗೆ ತೆಗೆದುಕೊಂಡಿರುವ ಹಲವಾರು ಫೋಟೊಗಳು ಇವೆ. ಸಚಿವ ಜಮೀರ್ ಅಹ್ಮದ್ಖಾನ್, ಶಾಸಕರಾದ ರೋಷನ್ ಬೇಗ್, ರಾಮಲಿಂಗಾ ರೆಡ್ಡಿ ಜತೆಗೂ ಮನ್ಸೂರ್ ಖಾನ್ ಫೋಟೋ ತೆಗೆಸಿಕೊಂಡಿದ್ದಾನೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮನ್ಸೂರ್ ಖಾನ್ನೊಂದಿಗೆ ಊಟ ಕೂಡ ಮಾಡಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖೀಸಿದ್ದಾರೆ.
ಮನ್ಸೂರ್ ಖಾನ್ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿರುವ ಸಾಧ್ಯತೆಯೂ ಇದೆ. ಹೀಗಾಗಿ, ಈ ಪ್ರಕರಣದ ಗಂಭೀರತೆಯನ್ನು ಅರಿತು ಕೂಡಲೇ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.