ಮೀಸಲು ಕಾನ್ಸ್ಸ್ಟೇಬಲ್ ಆಯ್ಕೆ ಪ್ರಕ್ರಿಯೆ ಬದಲು
Team Udayavani, Mar 15, 2020, 3:03 AM IST
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಮೀಸಲು ಪಡೆ(ಕೆಎಸ್ಆರ್ಪಿ-ಸಿಎಆರ್, ಐಆರ್ಬಿ)ಯ ಕಾನ್ಸ್ಸ್ಟೇಬಲ್ ಹುದ್ದೆ ನೇಮಕಾತಿ ಪ್ರಕ್ರಿಯೆಯಲ್ಲಿ ಕೆಲ ಬದಲಾವಣೆ ತರಲಾಗಿದ್ದು, ಈ ಕುರಿತು ರಾಜ್ಯ ಮೀಸಲು ಪೊಲೀಸ್ (ವೃಂದ ಮತ್ತು ನೇಮಕಾತಿ) ನಿಯಮ-2020 ಎಂಬ ಕರಡು ಅಧಿಸೂಚನೆ ಪ್ರಕಟಿಸಲಾಗಿದೆ.
ಈ ಮೊದಲು ಸಹಿಷ್ಣುತೆ ಪರೀಕ್ಷೆ ಮತ್ತು ದೇಹದಾಡ್ಯ ಪರೀಕ್ಷೆ ನಡೆಸಿದ ಬಳಿಕ ಅರ್ಹತೆ ಪಡೆದವರಿಗೆ ಲಿಖೀತ ಪರೀಕ್ಷೆ ನಡೆಸಲಾಗುತ್ತಿತ್ತು. ಈಗಾಗಲೇ ನಾಗರಿಕ ಪೊಲೀಸ್ ಕಾನ್ಸ್ಸ್ಟೇಬಲ್ ಹುದ್ದೆಗಳಿಗೆ ಮೊದಲಿಗೆ ಲಿಖೀತ ಪರೀಕ್ಷೆ ನಡೆಸಲಾಗುತ್ತಿದೆ. ಅದರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು 1:5ರ ಅನುಪಾತದಲ್ಲಿ ಸಹಿಷ್ಣುತೆ ಮತ್ತು ದೇಹದಾಡ್ಯತೆ ಪರೀಕ್ಷೆಗೆ ಆಹ್ವಾನಿಸಲಾಗುತ್ತಿದೆ.
ವಿಶೇಷ ಮೀಸಲು ಪಡೆಯ ಕಾನ್ಸ್ಸ್ಟೇಬಲ್ ನೇಮಕದಲ್ಲಿ ಈ ಬದಲಾವಣೆ ಜಾರಿಗೆ ತರುವ ಉದ್ದೇಶದಿಂದ ರಾಜ್ಯ ಮೀಸಲು ಪೊಲೀಸ್ (ವೃಂದ ಮತ್ತು ನೇಮಕಾತಿ) ನಿಯಮ-2020 ಎಂಬ ಕರಡು ಅಧಿಸೂಚನೆ ಪ್ರಕಟಿಸಲಾಗಿದೆ. 15 ದಿನಗಳ ಕಾಲಾವಕಾಶ ನೀಡಿದ್ದು, ಈ ಸಂದರ್ಭದಲ್ಲಿ ಬರುವ ಆಕ್ಷೇಪಣೆ ಪರಿಶೀಲಿಸಿ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.